ಬೆಂಗಳೂರು: ನ್ಯಾಯಾಲಯದಿಂದ ಮಧ್ಯಂತರ ಆದೇಶ ಪಡೆದಿರುವ ಮನವಿದಾರ (ಪಿಟಿಷನರ್) ವಿದ್ಯಾರ್ಥಿ ಗಳಿಗೆ ಮಾತ್ರ ಐದನೇ ಬಾರಿ ಬಿಎಎಂಎಸ್ ಪದವಿ ಪರೀಕ್ಷೆ ಬರೆಯಲು ಅನುಮತಿ ನೀಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾ ಲಯದ ಆಡಳಿತ ಮಂಡಳಿ ನಿರ್ಧರಿಸಿದೆ.
ಐದನೇ ಬಾರಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಅಂತಿಮ ವರ್ಷದ ಬ್ಯಾಚಲರ್ ಆಫ್ ಆಯುರ್ವೇದಿಕ್ ಮೆಡಿಕಲ್ ಸಿಸ್ಟಮ್ಸ್ (ಬಿಎಎಂಎಸ್) ವಿದ್ಯಾರ್ಥಿಗಳು ವಿ.ವಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಮರು ಪರೀಕ್ಷೆಗೆ ಅನುಮತಿ ನೀಡುವ ವಿಚಾರವಾಗಿ ಗುರುವಾರ ವಿ.ವಿ ಆಡಳಿತ ಮಂಡಳಿ ಸಭೆ ನಡೆಸಲಾಯಿತು.
‘ನ್ಯಾಯಾಲಯದಿಂದ ಮಧ್ಯಂತರ ಆದೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅನುಮತಿ ನೀಡಬಹುದು ಎಂದು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದೇಶ ಪ್ರತಿ ಪಡೆದಿರುವ ಮನವಿದಾರ (ಪಿಟಿಷನರ್) ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾ ಗುವುದು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಈ ವಿದ್ಯಾರ್ಥಿ ಗಳ ಫಲಿತಾಂಶವನ್ನು ತಡೆ ಹಿಡಿಯ ಲಾಗುವುದು’ ಎಂದು ವಿ.ವಿ ಕುಲಸಚಿವ ಡಾ.ಪ್ರೇಮ್ಕುಮಾರ್ ತಿಳಿಸಿದರು.
‘ಈ ಬಗ್ಗೆ ಸುಮಾರು 200 ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ಆದರೆ, ಈ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ’ ಎಂದರು.