ನಾಗಮಂಗಲ: ಎಮ್ಮೆಗೆ ನೀರು ಕುಡಿಸಲು ಕೆರೆಗೆ ಹೋದ 4ಮಂದಿ ನೀರು ಪಾಲಾಗಿ ಮೃತ ಪಟ್ಟ ಘಟನೆ ಶುಕ್ರವಾರ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಬೆಟ್ಟದ ಕೋಟೆ ಗ್ರಾಮದಲ್ಲಿ ಜರುಗಿದೆ.
ಬೆಟ್ಟದ ಕೋಟೆ ಗ್ರಾಮದ ಲೇ.ನಾರಾಯಣಪ್ಪನವರ ಪತ್ನಿ ಚಿಕ್ಕಮ್ಮ (60), ಅವರ ಸೊಸೆ ಮಮತ (27), ಮಗಳು ಪ್ರಮಿಳಾ ಮತ್ತು ಪ್ರಮೀಳಾಳ ಮಗ ಚಿದಾನಂದ (3) ಮೃತಪಟ್ಟವರು.
ಸಂಜೆ ಸಮೀಪದ ಕೆರೆಯಲ್ಲಿ ಎಮ್ಮೆಗೆ ನೀರುಣಿಸುವಾಗ ಅಲ್ಲಿದ್ದ ಎಮ್ಮೆ ಎಳೆದ ರಭಸಕ್ಕೆ 3 ವರ್ಷದ ಬಾಲಕ ಚಿದಾನಂದ ಸೇರಿದಂತೆ ಎಮ್ಮೆಯನ್ನು ಹಿಡಿದಿದ್ದ ಚಿಕ್ಕಮ್ಮ ಕೆರೆಗೆ ಬಿದ್ದರು. ಸಮೀಪದಲ್ಲೆ ಇದ್ದ ಚಿದಾನಂದನ ತಾಯಿ ಪ್ರಮಿಳಾ 2ರನ್ನು ರಕ್ಷಿಸಲು ಮುಂದಾದರು. ಆಕೆ ಯೂ ನೀರಿಗೆ ಸಿಲುಕಿದಾಗ ಸೊಸೆ ಮಮತಾ 3ಮಂದಿಯನ್ನು ಕಾಪಾಡಲು ಮುಂದಾದಳು. ಸೆಳೆತದಿಂದ ಹೊರ ಬರಲಾರದೆ 4 ಮಂದಿ ಅಸು ನೀಗಿದ್ದಾರೆ.
ಮೃತ ಪಟ್ಟವರನ್ನು ಕಾಳಿಂಗನಹಳ್ಳಿ ಗ್ರಾ.ಪಂ. ಅಧ್ಯಕ್ಷ ರವಿಯ ಕುಟುಂಬಕ್ಕೆ ಸೇರಿದವರೆಂದು ಗುರುತಿಸಲಾಗಿದೆ. ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.