ದೇವದುರ್ಗ: ಕಳೆದ ದಶಕದ ಹಿಂದೆ ಆರಂಭವಾದ ನಾರಾಯಣಪೂರ ಬಲದಂಡೆ ಯೋಜನೆ ಜಿಲ್ಲೆಯ ರಾಯಚೂರು, ದೇವದುರ್ಗ ಮತ್ತು ಲಿಂಗಸೂಗೂರು ಮೂರು ತಾಲ್ಲೂಕುಗಳ ರೈತರಿಗೆ ಜೀವನಾಡಿ ಆಗಬೇಕಾಗಿದ್ದರೂ ಇಲಾಖೆಯ ಬೇಜವಾಬ್ದಾರಿಯಿಂದಾಗಿ ವರ್ಷಪೂರ್ತಿ ರೈತರು ತೊಂದರೆ ಪಡುವಂತಾಗಿದೆ.
ಮೂರು ತಾಲ್ಲೂಕುಗಳ ಪೈಕಿ ಯೋಜನೆ ಪ್ರಕಾರ ದೇವದುರ್ಗ ತಾಲ್ಲೂಕು ಶೇ 90ರಷ್ಟು ಪ್ರದೇಶ ನೀರಾವರಿಗೆ ಒಳಪಡುವುದು ರೈತರ ಭಾಗ್ಯವಾಗಿದ್ದರೂ ಕೊನೆ ಭಾಗದ ರೈತರಿಗೆ ನೀರು ದೊರಕದೇ ಕಂಗಾಲಾಗಿದ್ದಾರೆ.
ಉಪಕಾಲುವೆ 9ರಿಂದ 18ರವೆಗೂ ದೇವದುರ್ಗ ತಾಲ್ಲೂಕಿನಲ್ಲಿ ಕಾಮಗಾರಿ ಮುಗಿದಿದೆ. ರೈತರು ಕಳೆದ ಐದು ವರ್ಷದಿಂದ ನೀರು ಪಡೆಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಒಂದು ದಿನವೂ ರೈತರ ಕಣ್ಣಿಗೆ ಬಿದ್ದ ಉದಾಹರಣೆ ಇಲ್ಲ.
ತಾಲ್ಲೂಕಿನ ಅಮರಾಪೂರ ಮತ್ತು ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಕೋಟೆಗಟ್ಟಲೇ ಹಣ ಖರ್ಚು ಮಾಡಿ ಇಲಾಖೆಯ ವಿವಿಧ ಕಚೇರಿ ಮತ್ತು ಅಧಿಕಾರಿ, ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನಿರ್ಮಿಸಲಾಗಿದ್ದರೂ ಪ್ರಯೋಜನವಾಗಿಲ್ಲ.
ಪಕ್ಕದ ಶಹಪೂರ, ಕೃಷ್ಣಪೂರ ಮತ್ತು ಯಾದಗಿರ ಪಟ್ಟಣಗಳಲ್ಲಿ ಇಲಾಖೆಯ ಬಹುತೇಕ ಅಧಿಕಾರಿ ಮತ್ತು ಎಂಜಿನಿಯರ್ಗಳು ವಾಸ್ತವ್ಯ ಮಾಡುತ್ತಿರುವುದರಿಂದ ಇಲ್ಲಿನ ರೈತರಿಗೆ ಇನ್ನಿಲ್ಲದ ತೊಂದರೆ ಎದುರಾಗಿದ್ದು, ಕಚೇರಿಗಳು ಬಿಕೋ ಎನ್ನುತ್ತಿವೆ.