ಬೆಂಗಳೂರು: ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಥ್ಲೀಟ್ಗಳಾದ ಸಹನಾ ಕುಮಾರಿ, ಬಲ್ಜಿಂದರ್ ಸಿಂಗ್, ಬಸಂತ್ ಬಹಾದೂರ್ ರಾಣಾ ಮತ್ತು ಕೆ.ಟಿ. ಇರ್ಫಾನ್ ಅವರನ್ನು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ (ಕೆಎಎ) ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಅದಿಲ್ ಜೆ ಸುಮರಿವಾಲಾ, ಕಾರ್ಯದರ್ಶಿ ಸಿ.ಕೆ. ವಲ್ಸನ್, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮತ್ತು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣ ಹಾಜರಿದ್ದರು.
ಕರ್ನಾಟಕದ ಸಹನಾ ಕುಮಾರಿ ಒಲಿಂಪಿಕ್ಸ್ನ ಹೈಜಂಪ್ನಲ್ಲಿ ಸ್ಪರ್ಧಿಸಲಿದ್ದಾರೆ. ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ ಅಂತರರಾಜ್ಯ ಅಥ್ಲೆಟಿಕ್ ಕೂಟದಲ್ಲಿ 1.92 ಮೀ. ಜಿಗಿಯುವ ಮೂಲಕ ಅವರು ಲಂಡನ್ನಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದರು. ಸಹನಾ ಕೋಚ್ ಉಕ್ರೇನ್ನ ಎವ್ಗೆನಿ ನಿಕಿತಿನ್ ಅವರನ್ನೂ ಸನ್ಮಾನಿಸಲಾಯಿತು.
ಬಸಂತ್ ಬಹಾದೂರ್ ರಾಣಾ 50 ಕಿ. ಮೀ. ನಡಿಗೆಯಲ್ಲಿ ಹಾಗೂ ಬಲ್ಜಿಂದರ್ ಸಿಂಗ್ ಮತ್ತು ಕೆ.ಟಿ. ಇರ್ಫಾನ್ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇನ್ನೊಬ್ಬ ನಡಿಗೆ ಸ್ಪರ್ಧಿ ಗುರ್ಮಿತ್ ಸಿಂಗ್ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.
ನಡಿಗೆ ಸ್ಪರ್ಧಿಗಳು ಕೋಚ್ ಡಾ. ಆರ್. ಗಾಂಧಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. `ಇಬ್ಬರು ಸ್ಪರ್ಧಿಗಳು ಒಲಿಂಪಿಕ್ಸ್ಗೆ `ಎ~ ಸ್ಟ್ಯಾಂಡರ್ಡ್ ಅರ್ಹತೆ ಪಡೆದಿದ್ದಾರೆ. ಎಲ್ಲ ನಾಲ್ಕು ಅಥ್ಲೀಟ್ಗಳಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದ್ದೇನೆ~ ಎಂದು ಆರ್. ಗಾಂಧಿ ನುಡಿದರು.