ವಿಟ್ಲ: ಒಳ್ಳೆಯ ಗುಣವಿದ್ದರೆ ಮಾತ್ರ ಬದುಕಿಗೆ ಶೋಭೆ ಹಣವಿದ್ದರೆ ಅಲ್ಲ. ಬೇರೆಯವರ ಋಣ ತೀರಿಸಿದಾಗ ಮಾತ್ರ ಮುಕ್ತಿ ಸಿಗಲು ಸಾಧ್ಯ. ಪ್ರಕೃತಿಯ, ಸಮಾಜದ ಋಣ ತೀರಿಸದೆ ಬದುಕುವ ಬದುಕು ಬದುಕಲ್ಲ; ಅದು ಸಾವು ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಮಾಣಿಯ ಪೆರಾಜೆ ರಾಮಚಂದ್ರಾಪುರ ಮಠದಲ್ಲಿ 20ನೇ ವಿಜಯ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ತೃತೀಯ ರಾಮಕಥಾ ಸರಣಿಯ ಎರಡನೇ ದಿನ ಸೋಮವಾರ ರಾತ್ರಿ ಪ್ರವಚನ ನೀಡಿದರು.
ರಾಮಾಯಣ ಶಿಕ್ಷಣ ನೀಡುವ ಕಾವ್ಯವಾಗಿದ್ದು, ರಾಮಾಯಣದಲ್ಲಿ ಬರುವ ಪ್ರತಿಯೊಂದು ಘಟನೆಯೂ ಪಾಠವಾಗಿದ್ದು, ರಾಮ ಮತ್ತು ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳು ಗುರು ಎಂದು ತಿಳಿಸಿದರು.
ನಮ್ಮಲ್ಲಿ ಇರುವುದನ್ನು ಹಂಚುವುದು ಆತಿಥ್ಯವಾಗಿರುತ್ತದೆ. ಇದನ್ನು ನೀಡಲು ಸಾಧ್ಯವಾಗದವ ದಾರಿದ್ರ್ಯವನ್ನು ಹೊತ್ತವ ಎಂದು ತಿಳಿಸಿದರು.
ಕರ್ಣಾಟಕ ಬ್ಯಾಂಕ್ ಸಿಜಿಎಂ ಮಹಬಲೇಶ್ವರ ಭಟ್, ನಿರ್ದೇಶಕರಾದ ಭೀಮ್ ಭಟ್ ಚೆನೈ, ಆರ್.ಬಿ.ಶಾಸ್ತ್ರಿ ಬೆಂಗಳೂರು ಅವರು ರಾಮಾಯಣ ಮಹಾ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಾಮಕಥಾ ಪ್ರಾರಂಭವಾಯಿತು.