ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿಗೆ ಅಂಜುತ್ತಿರುವ ವೈದ್ಯರು

Last Updated 29 ಜೂನ್ 2012, 19:30 IST
ಅಕ್ಷರ ಗಾತ್ರ

ಕಳೆದ ವರ್ಷದ ಡಿಸೆಂಬರ್ 22ರಂದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಬ್ ನಬಿ ಆಜಾದ್ `ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲ ರಾಷ್ಟ್ರೀಯ ಆಯೋಗ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು.

ಈ ಮಸೂದೆ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ಬೃಜೇಶ್ ಪಾಠಕ್ ಅಧ್ಯಕ್ಷತೆಯ ಸಂಸತ್ ಸ್ಥಾಯಿಸಮಿತಿಯ ಪರಿಶೀಲನೆಯಲ್ಲಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಇದನ್ನುವಿರೋಧಿಸುತ್ತಿದ್ದರೂ ಒಟ್ಟುಜನಾಭಿಪ್ರಾಯಮಸೂದೆಯಪರವಾಗಿದೆ.

                                _________________
  
ನಮ್ಮ ಆರೋಗ್ಯ ಕ್ಷೇತ್ರದ ಅಪ್ರತಿಮ ಸಾಧನೆಗಳು ಸುದ್ದಿ ಮಾಡುವಂತೆಯೇ ಅಲ್ಲಿನ ಕರಾಳ ಕಾರ್ಯಗಳೂ ಆಗಾಗ ಹೊರಬರುತ್ತಿರುತ್ತವೆ. ವಿಶ್ವದ ಯಾವುದೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನೂ ನಾಚಿಸುವಂತಹ ಅತಿ ನವೀನವಾದ ಚಿಕಿತ್ಸೆಗಳನ್ನು ನೀಡಬಲ್ಲ ಆಸ್ಪತ್ರೆಗಳೂ, ವೈದ್ಯರುಗಳೂ ನಮ್ಮಲ್ಲಿದ್ದಾರೆ.

ಇನ್ನೊಂದೆಡೆ ತಮ್ಮ ಜ್ಞಾನವನ್ನು ದುರುಪಯೋಗ ಮಾಡಿಕೊಂಡು ಅಮಾನವೀಯವಾದ ಕಾರ್ಯಗಳನ್ನೆಸಗುವ ವೈದ್ಯರುಗಳೂ ಸಾಕಷ್ಟಿದ್ದಾರೆ. ಸಯಾಮಿ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದ  ಸುದ್ದಿಯ ಮಗ್ಗುಲಲ್ಲೇ ಸಾವಿರಾರು ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡಿಸಿದ ವೈದ್ಯ ದಂಪತಿಯ ಬಂಧನದ ಸುದ್ದಿಯೂ ಕಾಣಸಿಗುತ್ತದೆ. ಯಾವುದೇ ಮಹದಾಸೆಯಿಲ್ಲದೆ,  ಲೋಲುಪತೆಗೆ ಒಳಗಾಗದೆ ಪ್ರಾಮಾಣಿಕತೆಯಿಂದ ದುಡಿಯುವ ವೈದ್ಯರ ಜೊತೆಗೇ ಐಷಾರಾಮಿ ಜೀವನಕ್ಕಾಗಿ ವೃತ್ತಿನಿಯಮಗಳನ್ನು ಗಾಳಿಗೆ ತೂರಲು ಹಿಂದುಮುಂದು ನೋಡದವರೂ ಇರುತ್ತಾರೆ.

ಇಂತಹ ಸನ್ನಿವೇಶದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ಎಲ್ಲ ಮಜಲುಗಳನ್ನೂ ನಿಯಂತ್ರಿಸುವ ಕ್ರಮಕ್ಕೆ ಸರ್ಕಾರವು ಮುಂದಾಗಿರುವಾಗ ವೈದ್ಯರ ಸಂಘಟನೆಗಳು ಅದನ್ನು ಕಟುವಾಗಿ ವಿರೋಧಿಸುತ್ತಿರುವುದನ್ನು ನಾವಿಂದು ಕಾಣುತ್ತಿದ್ದೆೀವೆ. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತಲೂ ಆರೋಗ್ಯ ವ್ಯವಸ್ಥೆಯನ್ನು ಆದಷ್ಟು ಜನಸ್ನೇಹಿಯನ್ನಾಗಿಸುವ ದೃಷ್ಟಿಯಿಂದ ಯಾವುದು ಒಳ್ಳೆಯದು ಎನ್ನುವುದೇ ಮುಖ್ಯವಾಗುತ್ತದೆ.

ಪ್ರಸ್ತುತ ನಮ್ಮ ದೇಶದಲ್ಲಿ ಹಲಬಗೆಯ ವೈದ್ಯರಿದ್ದು, ಅವರ ತರಬೇತಿ ಹಾಗೂ ವೃತ್ತಿಗಳ ಮೇಲೆ ನಿಗಾ ವಹಿಸುವುದಕ್ಕೆ ಹಲವು ವೈದ್ಯಕೀಯ ಪರಿಷತ್ತುಗಳನ್ನು ಕೇಂದ್ರೀಯ ಕಾಯಿದೆಗಳಡಿಯಲ್ಲಿ ನಿಯುಕ್ತಗೊಳಿಸಲಾಗಿದೆ. ಭಾರತೀಯ ವೈದ್ಯಕೀಯ ಪರಿಷತ್ತು ಅಧಿನಿಯಮ 1956ರ ಅಡಿಯಲ್ಲಿ ಸ್ಥಾಪಿತವಾಗಿರುವ ಭಾರತೀಯ ವೈದ್ಯಕೀಯ ಪರಿಷತ್ತು  ಆಧುನಿಕ ವೈದ್ಯ ವಿಜ್ಞಾನದಲ್ಲಿ ತರಬೇತಿ ನೀಡುವ ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸುವುದು, ಆಧುನಿಕ ವೈದ್ಯರ ಹೆಸರುಗಳನ್ನೂ, ಪದವಿಗಳನ್ನೂ ನೋಂದಾಯಿಸುವುದು ಹಾಗೂ ಅವರ ವೃತ್ತಿಸಂಹಿತೆಯನ್ನು ರೂಪಿಸಿ ಅದರಂತೆ ನಿಗಾ ವಹಿಸುವುದು, ತಪ್ಪಿತಸ್ಥ ವೈದ್ಯರ ನೋಂದಣಿಯನ್ನು ರದ್ದು ಪಡಿಸಿ ಅವರು ವೃತ್ತಿಯನ್ನು ಮುಂದುವರಿಸದಂತೆ ತಡೆಯುವುದು ಇವೇ ಮುಂತಾದ ಅಧಿಕಾರಗಳನ್ನು ಹೊಂದಿದೆ.

ಭಾರತೀಯ ವೈದ್ಯಕೀಯ ಪದ್ಧತಿಗಳೆನಿಸಿಕೊಂಡಿರುವ ಆಯುರ್ವೇದ, ಸಿದ್ಧ ಹಾಗೂ ಯುನಾನಿಗಳ ವೈದ್ಯರನ್ನು 1970ರ ಭಾರತೀಯ ವೈದ್ಯಶಾಸ್ತ್ರಗಳ ಕೇಂದ್ರ ಪರಿಷತ್ತಿನ ಕಾಯಿದೆಯಡಿಯಲ್ಲಿ ಸ್ಥಾಪಿತವಾಗಿರುವ ಭಾರತೀಯ ವೈದ್ಯಶಾಸ್ತ್ರಗಳ ಕೇಂದ್ರ ಪರಿಷತ್ತು ನಿಯಂತ್ರಿಸಿದರೆ, ಹೋಮಿಯೋಪತಿ ವೈದ್ಯರನ್ನು ನಿಯಂತ್ರಿಸುವ ಕಾರ್ಯವನ್ನು 1973ರ ಹೋಮಿಯೋಪತಿ ಕೇಂದ್ರ ಪರಿಷತ್ತಿನ ಕಾಯಿದೆಯಡಿಯಲ್ಲಿ ಸ್ಥಾಪಿತವಾಗಿರುವ ಹೋಮಿಯೋಪತಿ ಕೇಂದ್ರ ಪರಿಷತ್ತು ಮಾಡುತ್ತದೆ.

ಅದೇ ರೀತಿ, ದಂತ ವೈದ್ಯರು, ದಾದಿಯರು, ಔಷಧಿಕಾರರು ಹಾಗೂ ಇತರ ಸಹ ವೈದ್ಯಕೀಯ ವೃತ್ತಿಯವರನ್ನು ನಿಯಂತ್ರಿಸುವ ಆಯಾ ಪರಿಷತ್ತುಗಳೂ ಇವೆ. ಈಗಿರುವ ಪರಿಷತ್‌ಗಳು ಮುಖ್ಯವಾಗಿ ಆಯಾ ವೃತ್ತಿಗಳಲ್ಲಿ ಶಿಕ್ಷಣ ನೀಡುವ ಕಾಲೇಜುಗಳ ನಿಯಂತ್ರಣದಲ್ಲಿಯೇ ಬಹುಪಾಲು ಮುಳುಗಿದ್ದು ವೃತ್ತಿಗೆ ಸಂಬಂಧಿಸಿದ ಇತರ ವಿಚಾರಗಳತ್ತ ಅವು ಗಮನ ಹರಿಸುತ್ತಲೇ ಇಲ್ಲ ಎನ್ನಬಹುದು.

ವೈದ್ಯಶಿಕ್ಷಣದ ಉನ್ನತ ಗುಣಮಟ್ಟವನ್ನು ಕಾಯುವ ಮೂಲಕ ಎಲ್ಲಾ ಭಾರತೀಯರಿಗೆ ಉತ್ತಮ ಆರೋಗ್ಯ ಸೇವೆಯು ದೊರೆಯುವಂತೆ ಮಾಡುವುದೇ ಭಾರತೀಯ ವೈದ್ಯಕೀಯ ಪರಿಷತ್ತಿನ ಧ್ಯೇಯವಾಕ್ಯವೆಂದು ಅದರ ಜಾಲತಾಣದಲ್ಲಿ ಘೋಷಿಸಲಾಗಿದೆ. ಪರಿಷತ್ತು ಆ ಕೆಲಸವನ್ನಾದರೂ ಸರಿಯಾಗಿ ನಿಭಾಯಿಸುತ್ತಿದೆಯೇ ಎನ್ನುವುದು ಪ್ರಶ್ನಾರ್ಹವಾದರೂ, ಬೇರಾವ ಜವಾಬ್ದಾರಿಗಳ ಬಗ್ಗೆ ಅದು ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವುದಂತೂ ಇದರಿಂದ ಸ್ಪಷ್ಟವಾಗುತ್ತದೆ.
 
ಇಂತಹ ಸನ್ನಿವೇಶದಲ್ಲಿ ಆಧುನಿಕ ವೈದ್ಯ ವಿಜ್ಞಾನದ ಎಲ್ಲ ಅಂಗಗಳನ್ನು ಒಂದೇ ವ್ಯವಸ್ಥೆಯೊಳಗೆ ನಿಯಂತ್ರಿಸಲು ಸಾಧ್ಯವಾಗುವಂತೆ `ಆರೋಗ್ಯ ಸೇವೆಗಳಲ್ಲಿ ಮಾನವ ಸಂಪನ್ಮೂಲಗಳ ರಾಷ್ಟ್ರೀಯ ಆಯೋಗ~(ಎನ್‌ಸಿಎಚ್‌ಆರ್‌ಎಚ್)ವನ್ನು ಸ್ಥಾಪಿಸುವ ಮಸೂದೆಯನ್ನು 2011ರ ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಆಧುನಿಕ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವೃತ್ತಿ ವಿಶೇಷಗಳನ್ನು ನಿಯಂತ್ರಿಸುವುದಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಎಲ್ಲ ಪರಿಷತ್ತುಗಳೂ ಇನ್ನು ಈ ಪ್ರಸ್ತಾವಿತ ಆಯೋಗದ ನಿಯಂತ್ರಣಕ್ಕೆ ಒಳಪಡಲಿದ್ದು, ಈ ಪರಿಷತ್ತುಗಳ ಸರ್ವಾಧಿಕಾರವು ಇದರಿಂದಾಗಿ ಕೊನೆಗೊಳ್ಳಲಿದೆ.

ಆಧುನಿಕ ವೈದ್ಯವಿಜ್ಞಾನದ ವಿವಿಧ ವಿಭಾಗಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳನ್ನು ಯೋಜಿಸಿ, ಉತ್ತೇಜಿಸಲು ಹಾಗೂ ಎಲ್ಲೆಡೆ ಏಕರೂಪದ ವೃತ್ತಿ ಶಿಕ್ಷಣವನ್ನು ಸಾಧ್ಯವಾಗಿಸಲು ಹೊಸದಾದ ರಾಷ್ಟ್ರೀಯ ಆರೋಗ್ಯ ಶಿಕ್ಷಣ ಮಂಡಳಿಯನ್ನು ಈ ಆಯೋಗದಡಿಯಲ್ಲಿ ಸ್ಥಾಪಿಸಲಾಗುವುದು. ಆಧುನಿಕ ವೈದ್ಯವಿಜ್ಞಾನದಲ್ಲಿ ವೃತ್ತಿಪರ ಶಿಕ್ಷಣವನ್ನು ನೀಡುವ ಎಲ್ಲ ವಿದ್ಯಾಸಂಸ್ಥೆಗಳನ್ನು ಪರಿಶೀಲಿಸಿ ಅವುಗಳಲ್ಲಿರುವ ಸೌಲಭ್ಯಗಳ ಮೌಲ್ಯೀಕರಣ ಮಾಡುವುದಕ್ಕಾಗಿ ಪ್ರತ್ಯೇಕವಾದ ರಾಷ್ಟ್ರೀಯ ಮೌಲ್ಯೀಕರಣ ಹಾಗೂ ವಿಮರ್ಶಾ ಸಮಿತಿಯನ್ನೂ ಈ ಆಯೋಗದಡಿಯಲ್ಲಿ ಸ್ಥಾಪಿಸಲಾಗುವುದು.
 
ಇದರಿಂದಾಗಿ ಈ ವರೆಗೆ ವಿವಿಧ ಪರಿಷತ್ತುಗಳ ವ್ಯಾಪ್ತಿಗೊಳಪಟ್ಟಿದ್ದ ವೈದ್ಯಕೀಯ ಹಾಗೂ ಸಹ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗಳ ನಿಯಂತ್ರಣವು ಇನ್ನು ಮುಂದೆ ಅವುಗಳಿಂದ ಬೇರ್ಪಟ್ಟು ಈ ಹೊಸ ಆಯೋಗದಡಿಯಲ್ಲಿರುವ ಹೊಸ ಮಂಡಳಿಗಳ ವ್ಯಾಪ್ತಿಯೊಳಕ್ಕೆ ಬರಲಿವೆ ಹಾಗೂ ಪರಿಷತ್ತುಗಳ ಕಾರ್ಯವ್ಯಾಪ್ತಿಯು ಕೇವಲ ಆಯಾ ವೃತ್ತಿನಿರತರನ್ನು ನೋಂದಾಯಿಸಿ, ನಿಯಂತ್ರಿಸುವುದಕ್ಕಷ್ಟೇ ಸೀಮಿತಗೊಳ್ಳಲಿದೆ.

ವೈದ್ಯರು ತಮ್ಮ ವೃತ್ತಿ ಸಂಹಿತೆಯನ್ನು ಪಾಲಿಸುತ್ತಿರುವುದನ್ನು ಖಚಿತಪಡಿಸುವ ಜವಾಬ್ದಾರಿಯೂ ವೈದ್ಯಕೀಯ ಪರಿಷತ್ತಿನದ್ದಾಗಿದ್ದು, ಅದನ್ನು ತಪ್ಪಿ ಗಂಭೀರವಾದ ಲೋಪಗಳನ್ನೆಸಗಿದವರನ್ನು ಶಿಸ್ತುಕ್ರಮಕ್ಕೊಳಪಡಿಸುವ ಅಧಿಕಾರವನ್ನೂ ಅದು ಹೊಂದಿದೆ. ಆದರೆ ಮೊದಲೇ ಹೇಳಿದಂತೆ ಹೊಸ ಕಾಲೇಜುಗಳ ಗುಂಗಿನಲ್ಲಿರುವ ಪರಿಷತ್ತಿಗೆ ಇದನ್ನೆಲ್ಲ ಮಾಡಲು ಸಮಯವಿದ್ದಂತಿಲ್ಲ.

ಅಮೀರ್ ಖಾನ್ ನಡೆಸುತ್ತಿರುವ `ಸತ್ಯಮೇವ ಜಯತೇ~ ಕಾರ್ಯಕ್ರಮದಲ್ಲಿ ಐಎಂಎ ಅಧ್ಯಕ್ಷರಾದ ಡಾ. ಕೆ. ಕೆ. ತಲ್ವಾರ್ ಅವರೇ ಒಪ್ಪಿಕೊಂಡಂತೆ ಒಬ್ಬನೇ ಒಬ್ಬ ತಪ್ಪಿತಸ್ಥ ವೈದ್ಯನ ಮೇಲೂ ಪರಿಷತ್ತಿನ ವತಿಯಿಂದ ಶಿಸ್ತುಕ್ರಮಗಳನ್ನು ಕೈಗೊಂಡ ನಿದರ್ಶನಗಳಿಲ್ಲ. ಯಾವುದೇ ಔಷಧ ಕಂಪೆನಿಗಳಿಂದ ಪ್ರಾಯೋಜಕತ್ವವನ್ನಾಗಲೀ, ನೆರವನ್ನಾಗಲೀ ಪಡೆಯದಿರುವುದು, ತಮ್ಮ ವೃತ್ತಿಯಲ್ಲಿ ಒಬ್ಬರಿಂದೊಬ್ಬರು ಶುಲ್ಕವನ್ನು ಹಂಚಿಕೊಳ್ಳದಿರುವುದು ಇವೇ ಮುಂತಾದ ನಿರ್ಬಂಧಗಳನ್ನು ಪರಿಷತ್ತಿನ ವೃತ್ತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದರೂ, ಇವನ್ನೆಲ್ಲ ಹಾಡು ಹಗಲೇ ಗಾಳಿಗೆ ತೂರಲಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಐಎಂಎ ಸೇರಿದಂತೆ ಎಲ್ಲ ವೈದ್ಯಕೀಯ ಸಂಘಟನೆಗಳ ಎಲ್ಲ ಸಮ್ಮೇಳನಗಳೂ, ಎಲ್ಲ ವಿಚಾರಗೋಷ್ಠಿಗಳೂ ಕಂಪೆನಿಗಳ ಪ್ರಾಯೋಜಕತ್ವವಿಲ್ಲದೆ ನಡೆಯುವುದೇ ಇಲ್ಲವೆನ್ನುವ ಪರಿಸ್ಥಿತಿಯಿದ್ದು, ಹಲವು ವೈದ್ಯರು ಈ ಕಂಪೆನಿಗಳ ನೆರವಿನಿಂದ ಪದೇ ಪದೇ ವಿದೇಶಯಾತ್ರೆಗಳನ್ನು ಕೈಗೊಳ್ಳುತ್ತಿರುವುದೂ ಸಾಮಾನ್ಯವಾಗಿ ಬಿಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ರೋಗಿಗಳನ್ನೇ ಕತ್ತಲಲ್ಲಿಟ್ಟು  ಹಲವು ಹೊಸ ಔಷಧಗಳ ಪ್ರಯೋಗಗಳಲ್ಲೂ ಸಾಕಷ್ಟು ವೈದ್ಯರು ಪಾಲ್ಗೊಳ್ಳುತ್ತಿರುವುದು ಮತ್ತು ಅದರಿಂದಾಗಿ ಕೆಲವೊಂದು ರೋಗಿಗಳು ಗಂಭೀರವಾದ ಸಮಸ್ಯೆಗಳಿಗೆ ತುತ್ತಾಗಿರುವುದು ಕೂಡಾ ವರದಿಯಾಗಿದೆ.

ಈ ಎಲ್ಲ ಸಂದರ್ಭಗಳಲ್ಲಿ ಐಎಂಎ ನಿಲುವು ರೋಗಿಗಳ ಪರವಾಗಿಯಾಗಲೀ, ವೃತ್ತಿಯ ಘನತೆ-ಗೌರವಗಳ ಪರವಾಗಿಯಾಗಲೀ ಇದ್ದಂತಿಲ್ಲ. ಹಾಗಿರುವಾಗ, ವೈದ್ಯಕೀಯ ಪರಿಷತ್ತಿಗೆ ವೃತ್ತಿಯ ನಿಯಂತ್ರಣವಷ್ಟನ್ನೇ ವಹಿಸಿ ಅದರ ಮೂಲ ಜವಾಬ್ದಾರಿಯನ್ನು ನೆನಪಿಸುವ ಕೆಲಸವನ್ನು ಕೇಂದ್ರ ಸರಕಾರವು ಕೈಗೊಂಡರೆ ಅದನ್ನು ವಿರೋಧಿಸುವ ನೈತಿಕತೆಯು ಐಎಂಎಗೆ ಇದೆಯೇ?

ವೈದ್ಯಕೀಯ ಪರಿಷತ್ತು ಅದರ ಸದಸ್ಯರಿಂದ ಚುನಾಯಿಸಲ್ಪಟ್ಟ ಆಡಳಿತವನ್ನು ಹೊಂದಿರಬೇಕಾಗಿದ್ದರೂ ಕೇಂದ್ರ ಹಾಗೂ ರಾಜ್ಯಗಳಲ್ಲಿರುವ ವೈದ್ಯಕೀಯ ಪರಿಷತ್ತುಗಳಿಗೆ ಚುನಾವಣೆಗಳು ನಡೆದು ದಶಕಗಳೇ ಕಳೆದಿವೆ. ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಹದಿನೇಳು ವರ್ಷಗಳ ಬಳಿಕ ಕಳೆದ ವರ್ಷದ ಆಗಸ್ಟ್‌ನಲಿ ್ಲನಡೆದ ಚುನಾವಣೆಯಲ್ಲಿ 51,500 ಸದಸ್ಯರ ಪೈಕಿ ಕೇವಲ 6600 ಸದಸ್ಯರು, ಅಂದರೆ ಶೇ. 13ರಷ್ಟು ಸದಸ್ಯರು, ಮಾತ್ರವೇ ಮತ ಚಲಾಯಿಸಿದ್ದು, ಅದೀಗ ಕೋರ್ಟು ಮೆಟ್ಟಿಲೇರಿ ಸ್ಥಗಿತಗೊಂಡಿದೆ. ವೈದ್ಯಕೀಯ ಪರಿಷತ್ತಿನ ಆಗುಹೋಗುಗಳಲ್ಲಿ ಅದರ ಘನತೆಯನ್ನು ಕಾಯುವಲ್ಲಿ ವೈದ್ಯರಿಗೇ ಆಸಕ್ತಿಯಿದ್ದಂತಿಲ್ಲ. ಐಎಂಎ ಇದಕ್ಕೆ ಹೊರತಲ್ಲ.

ವೈದ್ಯಕೀಯ ಪರಿಷತ್ತು ವಿಫಲವಾಗಿರುವಲ್ಲಿ ಹೊಸ ಮಸೂದೆಯಡಿಯಲ್ಲಿ ಸ್ಥಾಪಿಸಲಾದ ಆಯೋಗವಾಗಲೀ, ಸಮಿತಿ-ಮಂಡಲಿಗಳಾಗಲೀ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದು ಎನ್ನುವ ಅಪೇಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ. ಈ ಆಯೋಗ ಹಾಗೂ ಅದರಡಿಯ ಸಮಿತಿಗಳ ಸದಸ್ಯರನ್ನು ಸರಕಾರದಿಂದ ನೇರವಾಗಿ ನೇಮಿಸಲ್ಪಟ್ಟ ಆಯ್ಕೆ ಸಮಿತಿಯೇ ಆರಿಸಲಿರುವುದರಿಂದ ಹೊಸ ಕಾಲೇಜುಗಳ ಸ್ಥಾಪನೆಯು ಇನ್ನು ಮುಂದಕ್ಕೆ ಸರಕಾರದ ನೇರ ನಿಯಂತ್ರಣಕ್ಕೆ ಒಳಪಡಲಿದೆ.

ಈಗಿನ ಮತ್ತು ಹಿಂದಿನ ಸರಕಾರಗಳು ವೈದ್ಯಕೀಯ ಪರಿಷತ್ತನ್ನು ನಡೆಸಿಕೊಂಡಿರುವ ರೀತಿಯನ್ನು ನೋಡಿದರೆ, ಹೊಸ ಕಾಲೇಜುಗಳ ಸ್ಥಾಪನೆಯ ಭರಾಟೆಯನ್ನೂ, ಅವುಗಳ ಗುಣಮಟ್ಟವನ್ನು ಕಾಯುವಲ್ಲಿ ಆಗಿರುವ ಸರ್ವವಿಧದ ಲೋಪಗಳನ್ನೂ ಗಮನಿಸಿದರೆ ಹೊಸ ವ್ಯವಸ್ಥೆಯಿಂದ ಹೆಚ್ಚಿನ ಒಳಿತನ್ನು ನಿರೀಕ್ಷಿಸುವುದು ಮೂರ್ಖತನವಾದೀತು. ಆದರೂ ಐಎಂಎ ಈ ಹೊಸ ವ್ಯವಸ್ಥೆಯನ್ನು ಸಾರಾ ಸಗಟಾಗಿ ವಿರೋಧಿಸುವ ಬದಲಿಗೆ ಅದನ್ನು ಇನ್ನಷ್ಟು ಹೆಚ್ಚು ಬಲಪಡಿಸುವಂತೆ ಹಾಗೂ ಅಲ್ಲಿನ ನೇಮಕಾತಿಗಳನ್ನು  ಪ್ರಜಾಸತ್ತಾತ್ಮಕವಾಗಿಯೂ, ಪಾರದರ್ಶಿಯಾಗಿಯೂ ನಡೆಸುವಂತೆ ಒತ್ತಡ ಹೇರುವುದು ಉಚಿತವಾಗುತ್ತದೆ.

ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಆಧುನಿಕ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಪರರ ಕೆಲಸಕಾರ್ಯಗಳನ್ನೂ ಉತ್ತಮಪಡಿಸುವ ನಿಜವಾದ ಇರಾದೆಯು ಸರ್ಕಾರಕ್ಕಿದ್ದರೆ, ವೈದ್ಯಕೀಯ ಶಿಕ್ಷಣವನ್ನು ಸಂಪೂರ್ಣವಾಗಿ ರಾಷ್ಟ್ರೀಕರಿಸಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ, ಚಂಢೀಗಡದ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮುಂತಾದ ದೇಶದ ಅತ್ಯುನ್ನತ ವೈದ್ಯ ವಿಜ್ಞಾನ ಸಂಸ್ಥೆಗಳ ಉಸ್ತುವಾರಿಯಲ್ಲಿ ವೈದ್ಯ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸುವುದೊಂದೇ ದಾರಿಯಾಗಿದೆ.

ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಈ ಸಂಸ್ಥೆಗಳ ನೆರವಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಿ, ಆ ಆರ್ಹತೆಯ ಆಧಾರದಲ್ಲಷ್ಟೆ ಪ್ರವೇಶಾವಕಾಶವನ್ನು ಒದಗಿಸಬೇಕು. ಅದಕ್ಕೆ ಬದಲಾಗಿ, ವೈದ್ಯ ವೃತ್ತಿ ಶಿಕ್ಷಣಕ್ಕೆ ಪ್ರವೇಶಾವಕಾಶವನ್ನು ನೀಡುವ ಅಧಿಕಾರವು  ಖಾಸಗಿ ಕಾಲೇಜುಗಳ ಕೈಗಳಲ್ಲಿರುವವರೆಗೂ ವೈದ್ಯ ಶಿಕ್ಷಣದ ಮಟ್ಟವು ಸುಧಾರಿಸುವುದು ಸಾಧ್ಯವಿಲ್ಲ.

ನಮ್ಮ ದೇಶದ ಅತ್ಯುನ್ನತವಾದ ಹಾಗೂ ಅತ್ಯುತ್ತಮವಾದ ವೈದ್ಯ ವಿಜ್ಞಾನ ಸಂಸ್ಥೆಗಳೆನಿಸಿಕೊಂಡಿರುವ ದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ, ಚಂಢೀಗಡದ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಲಕ್ನೋದ ಸಂಜಯ ಗಾಂಧಿ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಪುದುಚೇರಿಯ ಜವಹರಲಾಲ್ ನೆಹರೂ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಬೆಂಗಳೂರಿನ ನಿಮ್ಹಾನ್ಸ್, ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ಹಾಗೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬಳ್ಳಾರಿಗಳಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಎಲ್ಲವೂ ಸರ್ಕಾರಿ ಸಂಸ್ಥೆಗಳೇ ಆಗಿದ್ದು, ಸರ್ಕಾರದ ಬೆಂಬಲವಿದ್ದರೆ ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ಅತ್ಯುತ್ತಮವಾದ ನಿದರ್ಶನಗಳಾಗಿವೆ.
 
ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯೆಂದು ಕೊಚ್ಚಿಕೊಳ್ಳುವ ನಮ್ಮ ಸರ್ಕಾರಕ್ಕೆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಜನಸಾಮಾನ್ಯರ ಆರೋಗ್ಯರಕ್ಷಣೆಗಾಗಿ ಇನ್ನೊಂದಷ್ಟು ಖರ್ಚುಮಾಡುವುದೇನೂ ಅಸಾಧ್ಯವಲ್ಲ. ಆದರೆ ಅದಕ್ಕೆ ಸ್ವಹಿತಾಸಕ್ತಿಗಿಂತಲೂ ಸಾಮಾಜಿಕ ಕಳಕಳಿ ಹೆಚ್ಚಿರಬೇಕಾಗುತ್ತದೆ ಅಷ್ಟೇ. ಅಂತಹಾ ಆಡಳಿತಕ್ಕಾಗಿ ನಾವು ಕಾಯಬೇಕು, ಇಲ್ಲವೇ ಆರಿಸಿ ತರಬೇಕು. 

ಮಸೂದೆಯಲ್ಲಿ ಏನಿದೆ?
*  `ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲ ರಾಷ್ಟ್ರೀಯ ಆಯೋಗ ಮಸೂದೆ 2011~ರ ಉದ್ದೇಶ ವೈದ್ಯಕೀಯ (ಆರೋಗ್ಯ) ಶಿಕ್ಷಣದ ಗುಣಮಟ್ಟ ನಿರ್ಧರಿಸುವ ಹಾಗೂ ನಿಯಂತ್ರಿಸುವ ವ್ಯವಸ್ಥೆಯೊಂದನ್ನು ರೂಪಿಸುವುದು. 1947ರ ಭಾರತೀಯ ಶುಶ್ರೂಷಕರ ಮಂಡಳಿ ಕಾಯ್ದೆ, 1948ರ ಔಷಧವಸ್ತು ಕಾಯ್ದೆ, 1948ರ ದಂತವೈದ್ಯರ ಕಾಯ್ದೆ ಹಾಗೂ 1956ರ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಗಳನ್ನು ರದ್ದುಗೊಳಿಸುವ ಉದ್ದೇಶ ಈ ಮಸೂದೆಗೆ ಇದೆ.

*  ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲ ರಾಷ್ಟ್ರೀಯ ಆಯೋಗ (ಎನ್‌ಸಿಎಚ್‌ಆರ್‌ಎಚ್), ಆರೋಗ್ಯ ಶಿಕ್ಷಣದ ರಾಷ್ಟ್ರೀಯ ಮಂಡಳಿ (ಎನ್‌ಬಿಎಚ್‌ಇ) ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಅಂದಾಜು ಮಂಡಳಿ (ಎನ್‌ಇಎಸಿ) ಸ್ಥಾಪಿಸುವ ಪ್ರಸ್ತಾಪ ಮಸೂದೆಯಲ್ಲಿದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ವೃತ್ತಿಪರ ಮಂಡಳಿ, ಪರಿಷತ್ತುಗಳ ಸ್ಥಾಪನೆ ಹಾಗೂ ಖರ್ಚುವೆಚ್ಚ ತೂಗಿಸಲು `ಎನ್‌ಸಿಎಚ್‌ಆರ್‌ಎಚ್~ ನಿಧಿ ಸ್ಥಾಪಿಸುವ ವಿಚಾರ ಮಸೂದೆಯಲ್ಲಿದೆ.

*  ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು `ಎನ್‌ಸಿಎಚ್‌ಆರ್‌ಎಚ್~ ಅನುಮತಿ ಬೇಕಾಗುತ್ತದೆ. ಶಿಕ್ಷಣ ಸಂಸ್ಥೆ ಆರಂಭಿಸುವ ವ್ಯಕ್ತಿ ರಾಷ್ಟ್ರೀಯ ಆಯೋಗಕ್ಕೆ ವಿಸ್ತೃತ ಅರ್ಜಿ ಕಳುಹಿಸಬೇಕಾಗುತ್ತದೆ. ಆಯೋಗ ಅದನ್ನು ಮೌಲ್ಯಮಾಪನ ಮಂಡಳಿ (ಎನ್‌ಇಎಸಿ)ಗೆ ಕಳುಹಿಸುತ್ತದೆ. `ಎನ್‌ಇಎಸಿ~ ಈ ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯ, ಅದರ ಅಗತ್ಯ ಇತ್ಯಾದಿಗಳ ಅಧ್ಯಯನ ನಡೆಸಿ ವರದಿ ಸಲ್ಲಿಸುತ್ತದೆ.

ಆ ಶಿಫಾರಸು, ಟಿಪ್ಪಣಿ ಗಮನಿಸಿ `ಎನ್‌ಸಿಎಚ್‌ಆರ್‌ಎಚ್~ ಶಿಕ್ಷಣ ಸಂಸ್ಥೆ ಆರಂಭಿಸಲು ಅನುಮತಿ ನೀಡಬೇಕೋ, ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಒಂದು ವೇಳೆ ಅರ್ಜಿ ಸಲ್ಲಿಸಿದ ಒಂದು ವರ್ಷದೊಳಗೆ ಆಯೋಗದಿಂದ ಯಾವುದೇ ಮಾಹಿತಿ ಬಂದಿರದಿದ್ದಲ್ಲಿ ಅನುಮತಿ ನೀಡಲಾಗಿದೆ ಎಂದು ಭಾವಿಸಬಹುದು.

*  ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಪ್ಯಾರಾಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನರ್ಸಿಂಗ್ ಕೌನ್ಸಿಲ್ ಆಫ್ ಇಂಡಿಯಾದಂತಹ ಮಂಡಳಿಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಬಹುದು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿ ಕೈಗೊಳ್ಳಬಯಸುವವರು ಈ ಮಂಡಳಿಗಳಲ್ಲಿ ತಮ್ಮ ಪ್ರಮಾಣಪತ್ರ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

*  ಆರೋಗ್ಯ ಶಿಕ್ಷಣದ ರಾಷ್ಟ್ರೀಯ ಮಂಡಳಿ (ಎನ್‌ಬಿಎಚ್‌ಇ) ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ಶೈಕ್ಷಣಿಕ ಅಧ್ಯಯನಕ್ಕೆ ಯೋಜನೆ ಹಮ್ಮಿಕೊಳ್ಳಬಹುದು. ವೈದ್ಯ ವೃತ್ತಿಗೆ ಇಳಿಯುವವರು ಯಾವುದೇ ವೃತ್ತಿಪರ ಮಂಡಳಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮುನ್ನ  `ಎನ್‌ಬಿಎಚ್‌ಇ~ ಅವರ ಅರ್ಹತೆ ಪರೀಕ್ಷಿಸಬೇಕು.

*  ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬಯಸುವ ಭಾರತೀಯ ಪ್ರಜೆಗೆ ಭಾರತದಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯುವ ಅರ್ಹತೆ ಇದೆ ಎಂಬ ಪ್ರಮಾಣಪತ್ರವನ್ನು `ಎನ್‌ಬಿಎಚ್‌ಇ~ ನೀಡಬೇಕಾಗುತ್ತದೆ. ಈ ಪ್ರಮಾಣ ಪತ್ರ ಇಲ್ಲದಿದ್ದಲ್ಲಿ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅವಕಾಶ ಇರಬಾರದು. ಭಾರತದಿಂದ ಹೊರಗೆ ಕನಿಷ್ಠ ಮೂರು ವರ್ಷ ವೈದ್ಯಕೀಯ ವೃತ್ತಿ ಕೈಗೊಂಡಿದ್ದಲ್ಲಿ ಈ ಪರೀಕ್ಷೆಯಿಂದ ವಿನಾಯತಿ ನೀಡಬಹುದಾಗಿದೆ.

*  ಸರ್ಕಾರಿ ವೈದ್ಯಕೀಯ ಸಂಸ್ಥೆಯಿಂದ ಪದವಿ ಪಡೆದು, ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಲ್ಲಿ, ಅದಕ್ಕೂ ಮುನ್ನ ಭಾರತದಲ್ಲಿ ಮೂರು ವರ್ಷ ಕೆಲಸ ಮಾಡಿರಬೇಕು. ಹಾಗೆ ಮಾಡದಿದ್ದಲ್ಲಿ ಅವರ ನೋಂದಣಿ ರದ್ದುಪಡಿಸಲಾಗುವುದು. ಆ ವ್ಯಕ್ತಿ ಮತ್ತೆ ಭಾರತಕ್ಕೆ ಮರಳಲು ಆಶಿಸಿದಲ್ಲಿ `ಎನ್‌ಸಿಎಚ್‌ಆರ್‌ಎಚ್~ ನಿಗದಿ ಪಡಿಸಿರುವ ಷರತ್ತು, ನಿಬಂಧನೆಗಳನ್ನು ಪೂರೈಸಿ ಹೆಸರು ಮರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

*  ಅದೇ ರೀತಿ ಖಾಸಗಿ ಸಂಸ್ಥೆಯಿಂದ ಪದವಿ ಪಡೆದು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದಲ್ಲಿ ಮೂರು ವರ್ಷದೊಳಗೆ ಭಾರತಕ್ಕೆ ಮರಳಬೇಕು ಅಥವಾ ತಾವು ವೃತ್ತಿ ಕೈಗೊಂಡಿರುವ ಸ್ಥಳದ ಕುರಿತು ಆಯಾ ಮಂಡಳಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಅದನ್ನು ವೃತ್ತಿಸಂಹಿತೆಯ ಉಲ್ಲಂಘನೆ ಎಂದು ಭಾವಿಸಲಾಗುವುದು.

*  ವೈದ್ಯಕೀಯ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ವೃತ್ತಿಸಂಹಿತೆ ಉಲ್ಲಂಘಿಸಿದ್ದಲ್ಲಿ, ದುರ್ನಡತೆ ತೋರಿದ ಪಕ್ಷದಲ್ಲಿ ಯಾರಾದರೂ ಆ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದ್ದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಂಡಳಿಗಳು ತನಿಖೆ ನಡೆಸುವ ಅಧಿಕಾರ ಹೊಂದಿರಬೇಕು. ಆ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಎಚ್ಚರಿಕೆ ನೀಡುವ, ಅಮಾನತು ಮಾಡುವ, ಹೆಸರು ತೆಗೆದು ಹಾಕುವ ಹಾಗೂ ದಂಡ ವಿಧಿಸುವ ಅವಕಾಶ ಮಂಡಳಿಗಳಿಗೆ ಇರುತ್ತದೆ.

*  ರಾಷ್ಟ್ರೀಯ ಮಂಡಳಿಯ ನಿರ್ಧಾರವನ್ನು `ಎನ್‌ಸಿಎಚ್‌ಆರ್‌ಎಚ್~ ಅಡಿಯ `ನೀತಿ ಸಮಿತಿ~ಯಲ್ಲಿ ಪ್ರಶ್ನಿಸಬಹುದಾಗಿದೆ.
ತಮ್ಮ ಹೆಸರಿನಲ್ಲಿ ಮತ್ಯಾವುದೋ ವ್ಯಕ್ತಿಗೆ ವೃತ್ತಿ (ಪ್ರಾಕ್ಟೀಸ್)  ಕೈಗೊಳ್ಳಲು ಅವಕಾಶ ನೀಡುವುದು, ರೋಗಿಯ ಅನುಮತಿಯಿಲ್ಲದೇ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಪಡಿಸುವುದು ಹಾಗೂ ಕೆಲ ಕಾನೂನುಗಳ ಉಲ್ಲಂಘನೆಯನ್ನು ದುರ್ನಡತೆ ಅಥವಾ ವೃತ್ತಿಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

*  ವೈದ್ಯರು ನೀಡಿದ ಚಿಕಿತ್ಸೆಯಿಂದ ರೋಗಿಯ ಸ್ಥಿತಿ ಉಲ್ಬಣವಾದಲ್ಲಿ ರಾಜ್ಯ ಮಂಡಳಿಗೆ 60 ದಿನಗಳ ಒಳಗೆ ದೂರು ಸಲ್ಲಿಸಬಹುದು. ಈ ದೂರು ಸಲ್ಲಿಕೆಯಾದ 120 ದಿನಗಳ ಒಳಗೆ ಮಂಡಳಿ ಕ್ರಮ ಕೈಗೊಳ್ಳಬೇಕು.

*  ಅನುಮತಿ ಇಲ್ಲದೇ ಶಿಕ್ಷಣ ಸಂಸ್ಥೆ ನಡೆಸುವುದು, ನೋಂದಣಿ ಮಾಡದೇ ಪ್ರಾಕ್ಟೀಸ್ ಮಾಡುವುದು ಹಾಗೂ ಅರ್ಹತಾ ಪರೀಕ್ಷೆ ಎದುರಿಸದೇ ವಿವಿಧ ಮಂಡಳಿಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ವಿಧಿಸಲಾಗುತ್ತದೆ.                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT