ಕಾರವಾರ: ‘ಐಎನ್ಎಸ್ ವಿಕ್ರಮಾದಿತ್ಯ’ ವಿಮಾನ ವಾಹಕ ಯುದ್ಧ ನೌಕೆಯೊಂದಿಗೆ ಇಲ್ಲಿಗೆ ಬಂದಿರುವ ರಷ್ಯಾದ ತರಬೇತಿ ಸಿಬ್ಬಂದಿ ಶನಿವಾರ ನಗರದ ಕಡಲತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದುದು ಕಂಡುಬಂತು.
ಎರಡು ತಿಂಗಳ ಕಾಲ ನೌಕಾಯಾನ ಮಾಡಿದ್ದ ಅವರೆಲ್ಲರೂ ಶನಿವಾರ ವಿಲಾಸಿ ಮೂಡ್ನಲ್ಲಿದ್ದರು. ತಾವು ವಾಸ್ತವ್ಯ ಹೂಡಿರುವ ಹೋಟೆಲ್ನಲ್ಲಿ ಬೆಳಿಗ್ಗೆ ತಿಂಡಿ ಮುಗಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡಿದರು. ರಸ್ತೆ ಬದಿಗಳಲ್ಲಿನ ಪೆಟ್ಟಿಗೆ ಅಂಗಡಿಗಳಲ್ಲಿ ನಿಂತು ಸಿಗರೇಟ್ ಸೇದುತ್ತಾ ತಂಪು ಪಾನೀಯಗಳನ್ನು ಸೇವಿಸಿದರು. ಬಳಿಕ ತಮಗಾಗಿ ಮೀಸಲಾಗಿದ್ದ ಮೂರು ಬಸ್ನಲ್ಲಿ ಕಾರವಾರ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂತಸ ಪಟ್ಟರು.
ಮಧ್ಯಾಹ್ನ ಬಿಸಿಲು ನೆತ್ತಿ ಮೇಲೇರುತ್ತಿದ್ದ ಹಾಗೆ ಎಲ್ಲರೂ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ತೆರಳಿ ನೀರಿಗಿಳಿದು ಅಲ್ಲಿನ ಅಲೆಗಳಿಗೆ ಮೈ ಯೊಡಿದ್ದರು. ಕಡಲತೀರದ ಪ್ರಕೃತಿ ಸೌಂದರ್ಯ ಸವಿದ ಅವರು ಬ್ಯಾಗ್ನಲ್ಲಿ ತಂದಿದ್ದ ಕ್ಯಾಮೆರಾ ಹೊರತೆಗೆದು ಫೋಟೋ ಕ್ಲಿಕಿಸಿ ದರು. ಅರೆಬೆತ್ತ ಲಾಗಿ ಕಡಲತೀರದಲ್ಲೇ ಸಿಗರೇಟ್ ಹಾಗೂ ಮದ್ಯ ಸೇವನೆ ಮಾಡುತ್ತಾ ಮಜಾ ಮಾಡುತ್ತಿದ್ದರು. ಇದನ್ನು ಕಂಡ ಸ್ಥಳೀ ಯರು ಮುಜುಗರ ಅನುಭವಿಸುವಂತಾಯಿತು. ಅಷ್ಟರಲ್ಲಿ ವಿಷಯ ತಿಳಿದ ಸಬ್ಇನ್ಸ್ಪೆಕ್ಟರ್ ಆನಂದ್ ಮೂರ್ತಿ ಸ್ಥಳಕ್ಕೆ ಬಂದು, ‘ಕಡಲತೀರದಲ್ಲಿ ಮದ್ಯ ಸೇವನೆ ನಿಷಿದ್ಧ. ಆದ್ದರಿಂದ ಇಲ್ಲಿ ಮದ್ಯ ಸೇವಿಸಬೇಡಿ’ ಎಂದು ತಿಳಿ ಹೇಳಿದ ಮೇಲೆ ಎಲ್ಲರೂ ಮದ್ಯದ ಬಾಟಲಿಗಳನ್ನು ಚೀಲಗಳಿಗೆ ತುಂಬಿಕೊಂಡರು.
ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ: ದೇಶದ ಅತಿದೊಡ್ಡ ಯುದ್ಧನೌಕೆ ‘ವಿಕ್ರಮಾದಿತ್ಯ’, ಐದಕ್ಕೂ ಹೆಚ್ಚು ಬೆಂಗಾವಲು ಯುದ್ಧನೌಕೆಯೊಂದಿಗೆ ಮಂಗಳವಾರ ರಾತ್ರಿ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಲಂಗರು ಹಾಕಿದೆ. ನೌಕೆಯೊಂದಿಗೆ 1,600 ಸಿಬ್ಬಂದಿ ಹಾಗೂ ರಷ್ಯಾದ 183 ತರಬೇತುದಾರರು ಬಂದಿದ್ದಾರೆ. ನೌಕಾನೆಲೆಯಲ್ಲಿ ವಸತಿ ಸೌಲಭ್ಯದ ಕೊರತೆ ಕಾರಣ ರಷ್ಯಾದ ತರಬೇತುದಾರರಿಗೆ ನಗರದ ಹೋಟೆಲ್ಗಳಲ್ಲಿ 1 ವರ್ಷದ ಅವಧಿಗೆ ಕೊಠಡಿ ಕಾಯ್ದಿರಿಸಲಾಗಿದೆ. ರಷ್ಯನ್ ಶೈಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.