ಲಂಡನ್ (ಐಎಎನ್ಎಸ್): ಸೋಮಾಲಿಯಾದಲ್ಲಿ ಹೆಚ್ಚುತ್ತಿರುವ ಕಡಲುಗಳ್ಳತನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತವು, `ಅಂತರ್ ಯುದ್ಧದಿಂದ ಬಳಲಿರುವ ಆ ದೇಶ ದಲ್ಲಿ ಸುಭದ್ರತೆ ಸ್ಥಾಪನೆಯೇ ಪರಿಹಾರವಾಗಿದ್ದು ಇದಕ್ಕೆ ವಿಶ್ವದ ಎಲ್ಲ ರಾಷ್ಟ್ರಗಳು ಪ್ರಯತ್ನಿಸಬೇಕು~ ಎಂದು ಶುಕ್ರವಾರ ಇಲ್ಲಿ ಜಾಗತಿಕ ಸಮಾವೇಶದಲ್ಲಿ ಒತ್ತಾಯಿಸಿದೆ.
ಸೋಮಾಲಿಯಾದಲ್ಲಿ ಹಿಂಸಾಚಾರ ಕೊನೆಗೊಂಡು ಶಾಂತಿ ಸ್ಥಾಪಿಸಲು ವಿಶ್ವಸಂಸ್ಥೆಯ ನೇತೃತ್ವದಲ್ಲಿ ಅಂತರ ರಾಷ್ಟ್ರೀಯವಾಗಿ ಕೈಗೊಳ್ಳುವ ಕ್ರಮಗಳಿಗೆ ಭಾರತದ ಸಂಪೂರ್ಣ ಬೆಂಬಲವಿದೆ ಎಂದು ಸಮಾವೇಶದಲ್ಲಿ ಪಾಲ್ಗೊಂ ಡಿರುವ ವಿದೇಶಾಂಗ ರಾಜ್ಯ ಸಚಿವ ಇ. ಅಹಮದ್ ಹೇಳಿದ್ದಾರೆ.
ನ್ಯೂಯಾರ್ಕ್ ವರದಿ: ಸೋಮಾಲಿಯಾ ಕಡಲುಗಳ್ಳತನದ ನಿಯಂತ್ರಣಕ್ಕೆ ಹಾಗೂ ಕಡಲ್ಗಳ್ಳರನ್ನು ಶಿಕ್ಷಿಸಲು ಅಲ್ಲಿನ ಸರ್ಕಾರವೇ ಕಡಲುಗ್ಗಳತನ ನಿಗ್ರಹ ಕಾಯಿದೆಯನ್ನು ಜಾರಿಗೆ ತರಬೇಕೆಂದು ಭಾರತ ಶುಕ್ರವಾರ ಸಲಹೆ ನೀಡಿದೆ.
`ಕಡಲುಗಳ್ಳತನ ನಿಗ್ರಹ ಕಾಯಿದೆಯನ್ನು ಸೋಮಾಲಿಯಾ ಸೇರಿದಂತೆ ಆಫ್ರಿಕಾ ರಾಷ್ಟ್ರಗಳು ಜಾರಿಗೆ ತರಬೇಕೇ ಹೊರತು ಹೊರರಾಷ್ಟ್ರಗಳಿಂದ ಸಾಧ್ಯವಿಲ್ಲ~ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಉಪರಾಯಭಾರಿ ಮಂಜೀವ್ ಸಿಂಗ್ ಪುರಿ ಅವರು ಸೋಮಾಲಿಯ ಪರಿಸ್ಥಿತಿ ಕುರಿತ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ.