ಕುಮಟಾ: ತಾಲ್ಲೂಕಿನ ದೀವಗಿ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಉದ್ದಿಮೆಯೊಂದರ ಸ್ಥಾಪನೆಗಾಗಿ ಖಾಸಗಿ ಜಾಗದಲ್ಲಿ ಕಡಿದ ಗುಡ್ಡದ ನಡುವಿನಿಂದ ನೀರಿನ ಒರತೆ ಹರಿಯುವ ದೃಶ್ಯ ನಯನ ಮನೋಹರವಾಗಿದೆ.
ಕಳೆದ ಹಲವು ದಿನಗಳಿಂದ ಮಳೆಯಿಲ್ಲದಿದ್ದರೂ ಕತ್ತರಿಸಿದ ಗುಡ್ಡದ ನಡುವಿನಿಂದ ಮಾತ್ರ ಇಲ್ಲಿ ಜೀವ ಸೆಲೆಯಂತೆ ನೀರು ಹರಿಯುತ್ತಿದೆ. ಇದಕ್ಕೆ ಕಾರಣ ಈ ಪ್ರದೇಶದ ಹಿಂದೆ ಅಂದರೆ, ಸುಮಾರು ಎರಡು-ಮೂರು ಕಿಲೋ ಮೀಟರ್ ದೂರದ ಮಾನೀರ, ಮೂರೂರು ಗುಡ್ಡ ಪ್ರದೇಶದಲ್ಲಿ ಅಲ್ಲಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಹಳ್ಳಗಳಿವೆ. ಆ ಹಳ್ಳದಲ್ಲಿ ಸಂಗ್ರಹಗೊಂಡ ಮಳೆ ನೀರು ಅರ್ಧ ಬೇಸಿಗೆ ಬರುವವರೆಗೂ ಇಂಗುವುದಿಲ್ಲ. ಬೇಸಿಗೆಯಲ್ಲೂ. ನೈಸರ್ಗಿಕವಾಗಿ ಇ್ಲ್ಲಲಿ ನೆಲದಲ್ಲಿ ಇಂಗುವ ನೀರು ಕೆಳಭಾಗದ ಪ್ರದೇಶಕ್ಕೆ ಸದಾ ನೀರು ಪೂರೈಕೆ ಮಾಡುತ್ತದೆ. ಕೆಳಭಾಗದ ಗುಡ್ಡ ಕತ್ತರಿಸಿದಾಗ ಈ ಸೋಜಿಗ ಸಂಗತಿ ಬೆಳಕಿಗೆ ಬಂದಿತು. ನೀರಿಂಗಿಸುವ ಯೋಜನೆಯ ಬಗ್ಗೆ ನಮಗೆಲ್ಲ ಇದು ನಿಸರ್ಗವೇ ತೋರಿಸಿಕೊಟ್ಟ ಒಂದು ಅತ್ಯುತ್ತಮ ಮಾದರಿಯಾಗಿದೆ. ಹ್ದ್ದೆದಾರಿ ಬದಿಯ ಈ ಮನೋಹರ ದೃಶ್ಯವನ್ನು ವಾಹನಗಳಲ್ಲಿ ಪ್ರಯಾಣಿಸುವವರು ನೋಡಿ ಆನಂದಿಸುತ್ತಿದ್ದಾರೆ.