ಬಿಎಂಟಿಸಿ ಸಾವಿರಾರು ಬಸ್ಸುಗಳನ್ನು ಪ್ರತಿನಿತ್ಯ ಕಾರ್ಯಾಚರಣೆ ಮಾಡುತ್ತಾ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮಗೂ ಹೆಮ್ಮೆಯೇ. ಆದರೆ ಕೆಲವು ಮಾರ್ಗಗಳನ್ನು ಅದು ನಿರ್ಲಕ್ಷಿಸಿರುವುದಕ್ಕೆ ಕಾರಣವೇನೋ ಗೊತ್ತಾಗುತ್ತಿಲ್ಲ.
ಕೆ.ಆರ್ ಮಾರುಕಟ್ಟೆ ಮತ್ತು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮಹಾನಗರದ ಎಲ್ಲಾ ಮೂಲೆಗಳಿಂದಲೂ ಬಸ್ ಸೌಲಭ್ಯವಿದೆ. ಆದರೆ ಅಷ್ಟೇ ಪ್ರಮುಖವಾದ ಶಿವಾಜಿನಗರ ಬಸ್ ನಿಲ್ದಾಣವನ್ನು ಅದು ನಿರ್ಲಕ್ಷಿಸುತ್ತಿರುವುದು ಬರಿಗಣ್ಣಿಗೆ ಗೋಚರಿಸುವ ಸತ್ಯ.
ಕನಕಪುರ ರಸ್ತೆಯಿಂದ ಶಿವಾಜಿನಗರ ಮಾರ್ಗಕ್ಕೆ ಪ್ರಯಾಣಿಸುವ ಸಾವಿರಾರು ಮಂದಿ ಪ್ರಯಾಣಿಕರು ಆ ಮಾರ್ಗದಿಂದ ನೇರ ಬಸ್ ಸೌಲಭ್ಯವಿಲ್ಲದೆ ಬನಶಂಕರಿ, ಜಯನಗರ 4ನೇ ಬ್ಲಾಕ್, ಮಾರುಕಟ್ಟೆ, ಕಾರ್ಪೊರೇಷನ್ ಮೂಲಕ ಎರಡು ಮೂರು ಬಸ್ಸುಗಳನ್ನು ಬದಲಾಯಿಸಿಕೊಂಡು ಬರಬೇಕಾದ ಕಷ್ಟ ಅನುಭವಿಸುತ್ತಿದ್ದಾರೆ.
ಬನಶಂಕರಿ ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ ಮೂರ್ನಾಲ್ಕು ಶಿವಾಜಿನಗರ ಬಸ್ಸುಗಳ ಬಂದರೂ ಕಾಲಿಡಲೂ ಆಗದಷ್ಟು ಜನಸಂದಣಿ ಇರುತ್ತದೆ. ಊರೆಲ್ಲ ಸುತ್ತಿ ಬಸ್ ಹೊಂಚಿ ಕಚೇರಿ ಸೇರುವ ಹೊತ್ತಿಗೆ ವಿಳಂಬವಾಗಿರುತ್ತದೆ. ಈ ಸಮಸ್ಯೆಗೆ ಪರಿಹಾರ ಎಂತು? ಯಾವಾಗ?