ಬೆಂಗಳೂರು: `ಇಂದಿನ ಮಕ್ಕಳು ಕನ್ನಡ ಭಾಷೆಯ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವ ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು' ಎಂದು ಲೇಖಕ ಬಿ.ಎಸ್.ಕೇಶವರಾವ್ ಕಿವಿಮಾತು ಹೇಳಿದರು.
ಅಂಕಿತ ಪುಸ್ತಕ ಪ್ರಕಾಶನವು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ಮಕ್ಕಳಿಗೆ ಕನ್ನಡ ಭಾಷೆಯ ಕೃತಿಗಳನ್ನು ಓದಲು ಪ್ರೇರೇಪಿಸಬೇಕು ಮತ್ತು ಅಗತ್ಯ ಪುಸ್ತಕಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು.
ಮನೆಗಳಲ್ಲಿ ಗ್ರಂಥಾಲಯಗಳ ಬದಲಿಗೆ ಫ್ರೀಡ್ಜ್, ಸೊಫಾಗಳಂತಹ ಐಷಾರಾಮಿ ವಸ್ತುಗಳ ಸಂಗ್ರಹಣೆ ಜತೆಗೆ ಪ್ರತಿಯೊಬ್ಬರು ಅಮೂಲ್ಯ ಪುಸ್ತಕಗಳ ಸಂಗ್ರಹಣೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸಿಕೊಳ್ಳುವಲ್ಲಿ ಮಕ್ಕಳಿಗೂ ಉತ್ತಮ ವಾತಾವರಣ ಕಲ್ಪಿಸಿದಂತಾಗುತ್ತದೆ ಎಂದರು.
ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, `ಅಭಿಜ್ಞಾನ ಶಾಕುಂತಲ' ನಾಟಕದಲ್ಲಿ ಹಲವು ಸಂಸ್ಕೃತ ಶ್ಲೋಕಗಳಿವೆ. ಅವುಗಳನ್ನು ಓದುವುದು ಸುಲಭ ಆದರೆ ಅರ್ಥಮಾಡಿಕೊಳ್ಳಲು ಅಪಾರ ಸಂಸ್ಕೃತ ಜ್ಞಾನದ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕೃತಿಗಳು; ಮಹಾಬಲ ಸೀತಾಳಬಾವಿ ಅವರು ಅನುವಾದಿಸಿರುವ ಮಹಾಕವಿ ಕಾಳಿದಾಸನ `ಅಭಿಜ್ಞಾನ ಶಾಕುಂತಲ' (ನಾಟಕ), `ಚಾಟು ಕವಿತೆಗೆ ಚುಟುಕು ಕತೆ' ಮತ್ತು ಬಿ.ಎಸ್.ಕೇಶವರಾವ್ ಅವರ `ಸರಸ ಸಾಹಿತ್ಯ ಸಾರಾಮೃತ' ಹಾಗೂ `ಕನ್ನಡಕ್ಕೊಬ್ಬನೇ ಕೈಲಾಸಂ'.