ಹೊಳೆನರಸೀಪುರ: `ಎಲ್ಲ ಭಾಷೆ, ವರ್ಗದ ಜನರು ಕನ್ನಡ ನಾಡಿನೊಳಗೆ ಬಂದು ಸೇರಿದ್ದಾರೆ. ಅವರೆಲ್ಲರ ಮಧ್ಯದಲ್ಲೂ ಗ್ರಾಮೀಣ ಜನರ ಶ್ರಮದಿಂದಾಗಿ ನಮ್ಮ ನಾಡಿನ ಕಲೆ, ಸಂಸ್ಕೃತಿಗಳು ಜೀವಂತವಾಗಿ ಉಳಿದುಕೊಂಡಿವೆ~ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಯೋಗೇಶ್ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ರಂಗಗೀತೆ ಸ್ಪರ್ಧೆ ಉದ್ಘಾ ಟಿಸಿ ಅವರು ಮಾತನಾಡಿದರು. `ಹಳ್ಳಿಯ ಜನರು ರಚಿಸಿದ ರಂಗಗೀತೆ ಗಳು ಸಮಾಜ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವು. ಸಿನಿಮಾ ಸಾಹಿತ್ಯ ದಿಂದಾಗಿ ಈಗ ರಂಗ ಗೀತೆಗಳು ಹಿಂದಕ್ಕೆ ಸರಿಯುತ್ತಿವೆ. ಸಿನಿಮಾ ಸಂಗೀತ ರಂಗಗೀತೆಗಳಂತೆ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ನಾಡಿನ ಎಲ್ಲ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು~ ಎಂದರು.
ರಂಗಕರ್ಮಿ ವಿಜಯಕುಮಾರ್ ಮಾತನಾಡಿ, `ನಮ್ಮ ರಾಜ್ಯಕ್ಕಿಂತ ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ರಂಗಗೀತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಕಲಾ ಪ್ರಕಾರವನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕು~ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪುಟ್ಟಸೋಮಪ್ಪ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ಪುರಸಭಾ ಸದಸ್ಯ ಬಾ.ರಾ. ಸುಬ್ಬರಾಯ, ವೇದಿಕೆಯಲ್ಲಿದ್ದರು. ಇದೇ ಸಂದರ್ಭ ದಲ್ಲಿ ರಂಗಕರ್ಮಿ ವೀರಪ್ಪ ಅವರನ್ನು ಸನ್ಮಾನಿಸಲಾಯಿತು. 40 ಕ್ಕೂ ಹೆಚ್ಚು ರಂಗ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.