ಲೂಧಿಯಾನ (ಪಿಟಿಐ): ಆತಿಥೇಯ ಭಾರತ ತಂಡ ಇಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಚಾಂಪಿಯನ್ಷಿಪ್ ಗೆದ್ದುಕೊಂಡಿದೆ. ಇದರೊಂದಿಗೆ ಭಾರತ ಎರಡು ಕೋಟಿ ರೂಪಾಯಿ ಬಹುಮಾನ ಪಡೆಯಿತು. ಅತ್ಯಂತ ಹೆಚ್ಚು ಬಹುಮಾನ ಮೊತ್ತದ ಚಾಂಪಿಯನ್ಷಿಪ್ ಇದಾಗಿತ್ತು.
ಭಾನುವಾರ ಮಧ್ಯೆ ರಾತ್ರಿ ಗುರು ನಾನಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 59-25 ಪಾಯಿಂಟ್ಗಳಿಂದ ಕೆನಡಾ ತಂಡವನ್ನು ಸೋಲಿಸಿತು.
ವಿರಾಮದ ವೇಳೆಗೆ ಆತಿಥೇಯರು 28-13 ಪಾಯಿಂಟ್ಗಳಿಂದ ಮುಂದಿದ್ದರು. ಮಹಿಳೆಯರ ವಿಭಾಗದಲ್ಲೂ ಭಾರತ ಚಾಂಪಿಯನ್ ಆಯಿತು. ಫೈನಲ್ನಲ್ಲಿ 44-17 ಪಾಯಿಂಟ್ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಅದಕ್ಕಾಗಿ 25 ಲಕ್ಷ ರೂಪಾಯಿ ಬಹುಮಾನ ಪಡೆಯಿತು.
ಈ ಗೆಲುವಿನಿಂದಾಗಿ ಭಾರತ ತಂಡದ ಪುರುಷ ಹಾಗೂ ಮಹಿಳೆಯರಿಗೆ ಬಹುಮಾನ ಹಾಗೂ ಮೆಚ್ಚುಗೆಯ ಸುರಿಮಳೆ ಹರಿಯುತ್ತಿದೆ. ತಂಡದ ಎಲ್ಲರಿಗೂ ಸರ್ಕಾರಿ ನೌಕರಿ ನೀಡಲು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನಿರ್ಧರಿಸಿದ್ದಾರೆ.