ಬೆಂಗಳೂರು: ಟನ್ ಕಬ್ಬಿಗೆ ರೂ.2400 ಮುಂಗಡ ನಿಗದಿಪಡಿಸಿರುವುದು ಸರಿಯಲ್ಲ. ಕನಿಷ್ಠ ರೂ.3500 ನಿಗದಿಪಡಿಸ ಬೇಕು ಎಂದು ಸರ್ಕಾರವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರನ್ನು ಬುಧವಾರ ಭೇಟಿ ಮಾಡಿ ಕಬ್ಬು ಬೆಲೆ ನಿಗದಿ ಕುರಿತು ಮಾತುಕತೆ ನಡೆಸಿತು. ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಇಳುವರಿ ಆಧಾರದ ಮೇಲೆ ಇಡೀ ರಾಜ್ಯದ ಕಬ್ಬು ದರ ನಿಗದಿ ಮಾಡುವುದು ಸರಿಯಲ್ಲ. ಮಂಡ್ಯದಲ್ಲಿ ಶೇ 8ರಷ್ಟು ಇಳುವರಿ ಬಂದರೆ, ಇತರೆಡೆ ಹೆಚ್ಚು ಇಳುವರಿ ಬರುತ್ತಿದೆ. ಹೆಚ್ಚು ಇಳುವರಿ ಇರುವೆಡೆ ಕಬ್ಬಿನ ದರ ಹೆಚ್ಚು ಇರಬೇಕು ಎಂದು ಆಗ್ರಹಪಡಿಸಿತು.
ಈ ಸಂಬಂಧ ಸೆ. 30ರೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ನಿಯೋಗ ಎಚ್ಚರಿಸಿತು.
ಮಂಡಳಿ ಪುನರ್ರಚನೆ: ಸರ್ಕಾರ ರಚಿಸಿರುವ ಕಬ್ಬು ಖರೀದಿ ಮಂಡಳಿ ಸದಸ್ಯರಾಗಿ ಕುರುಬೂರು ಶಾಂತ ಕುಮಾರ್ ಅವರನ್ನು ನೇಮಿಸಬೇಕು ಎಂದೂ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ.