ಬೆಂಗಳೂರು: ಕರ್ನಾಟಕ ತಂಡದವರು ತಮಿಳುನಾಡಿನ ದಿಂಡಿಗಲ್ನಲ್ಲಿ ನಡೆದ 58ನೇ ರಾಷ್ಟ್ರೀಯ ಜೂನಿಯರ್ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದೆ.
ಅಂತಿಮ ಪಂದ್ಯದಲ್ಲಿ ಕರ್ನಾಟಕದ ವನಿತೆಯರು 29-15, 29-26ರಿಂದ ತಮಿಳುನಾಡು ತಂಡವನ್ನು ಸೋಲಿಸಿದರು. ನಾಲ್ಕರ ಘಟ್ಟದಲ್ಲಿ ಕರ್ನಾಟಕವು ಕೇರಳವನ್ನು 29-13, 29-14ರಿಂದ ಮಣಿಸಿತ್ತು.
ತಂಡದ ನಾಯಕಿ ಕೆ.ಎಂ. ಪಯಸ್ವಿನಿ ಮತ್ತು ಎಂ.ಆರ್. ಕಾವ್ಯಾ ಅವರಿಗೆ ಟೂರ್ನಿಯಲ್ಲಿ ಅತ್ಯುತ್ತಮ ಆಟಕ್ಕಾಗಿ ಸ್ಟಾರ್ ಆಫ್ ಇಂಡಿಯ ಪ್ರಶಸ್ತಿ ನೀಡಲಾಯಿತು. ಇವರಿಬ್ಬರೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಟಗಾರ್ತಿಯರು.
ಬಾಲಕರ ವಿಭಾಗದಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದುಕೊಂಡಿತು. ತಂಡದ ನಾಯಕ ಕೆ.ಆರ್.ನಗರದ ಮಂಜುನಾಥ್ ಅವರು ಸ್ಟಾರ್ ಆಫ್ ಇಂಡಿಯ ಪ್ರಶಸ್ತಿ ಗಳಿಸಿದರು.