ಗುಲ್ಬರ್ಗ: ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಗೆ 2600 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಆದರೆ ಬಜೆಟ್ನಲ್ಲಿ ಈ ಬಗ್ಗೆ ಚಕಾರವೂ ಎತ್ತಿಲ್ಲ ಎಂದು ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ವಿಭಾಗದ ಟಿ.ಆರ್.ಚಂದ್ರಶೇಖರ್ ವಿಷಾದಿಸಿದರು.
ಶುಕ್ರವಾರ ಗುಲ್ಬರ್ಗ ನಗರದ ಕನ್ನಡ ಭವನದಲ್ಲಿ ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ ‘ಗುಲ್ಬರ್ಗ ವಿಭಾಗಕ್ಕೆ ಸಂವಿಧಾನದ 371ನೆಯ ಕಲಂ’ ಅನ್ವಯಿಸುವ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ಕೇವಲ 371ನೇ ಪರಿಚ್ಛೇದದ ಬದಲಾವಣೆಯಿಂದ ಈ ವಿಭಾಗದ ಅಸಮತೋಲನೆ ನಿವಾರಣೆಯಾಗದು. ಅಭಿವೃದ್ಧಿ ಸೂಚಿಯ ಸಂಕೇತಗಳಲ್ಲಿ ಬದಲಾವಣೆ ಬೇಕಿದೆ ಎಂದರು.
ಹಿಂದುಳಿದ ಪ್ರದೇಶಕ್ಕೆ ತಕ್ಕ ಮಾನದಂಡದಂತೆ ಬಂಡವಾಳ, ಅನುಕೂಲಗಳು ವಿನಿಯೋಗವಾಗಬೇಕು. ಆಗ ಅಸಮತೋಲನೆಯ ನಿವಾರಣೆಯಾಗುತ್ತದೆ. ನಂಜುಂಡಪ್ಪ ವರದಿಯ ಪ್ರಕಾರ 114 ತಾಲ್ಲೂಕುಗಳನ್ನು ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಇವುಗಳಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಪ್ರದೇಶಗಳಿಗೆ ಅತಿ ಹೆಚ್ಚಿನ ಅನುದಾನ ನೀಡಬೇಕು. ಅಗತ್ಯಕ್ಕೆ ತಕ್ಕಂತೆ ಅನುದಾನದ ಹಂಚಿಕೆಯಾಗಬೇಕು ಎಂದು ವಿವರಿಸಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿಗಳಾದ ನಿತ್ಯಾನಂದ ಸ್ವಾಮಿ, ಮಾರುತಿ ಮಾನ್ಪಡೆ, ಪ್ರೊ.ಆರ್.ಕೆ.ಹುಡುಗಿ, ಕೆ.ನೀಲಾ ಮುಂತಾದವರು ಹಾಜರಿದ್ದರು.