ನವದೆಹಲಿ (ಪಿಟಿಐ): ಜೈಲಿನಿಂದ ಬಿಡುಗಡೆಯಾಗಿರುವ 2ಜಿ ತರಂಗಾಂತರ ಹಗರಣದ ಪ್ರಮುಖ ಆರೋಪಿ, ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರು ಬುಧವಾರ ಸಂಸತ್ ಕಲಾಪಕ್ಕೆ ಹಾಜರಾದರು.
ರಾಜಾ ಕಾರಿನಿಂದ ಇಳಿದು ನೇರವಾಗಿ ಲೋಕಸಭೆಗೆ ತೆರಳಿದ ಸಮಯದಲ್ಲಿ ಮಾಧ್ಯಮದವರು ಪೈಪೋಟಿ ಮೇಲೆ ಕ್ಯಾಮೆರಾ ಕ್ಲಿಕ್ಕಿಸಿದರು.
ಪ್ರತಿಕ್ರಿಯೆಗೆ ಕಾಯುತ್ತಿದ್ದ ಮಾಧ್ಯಮದವರನ್ನು ಅವರು ಮಾತನಾಡಿಸಲಿಲ್ಲ. ಮಧ್ಯಾಹ್ನ ಶೂನ್ಯವೇಳೆ ಬಳಿಕ ಕಲಾಪಕ್ಕೆ ಹಾಜರಾದ ರಾಜಾ, ಕೆಲವು ಸದಸ್ಯರೊಂದಿಗೆ ಸಂತಸ ಹಂಚಿಕೊಂಡರು. ಡಿಎಂಕೆ ಕೆಲ ಸದಸ್ಯರೊಂದಿಗೆ ಕೊನೆ ಸಾಲಿನಲ್ಲಿ ಕುಳಿತಿದ್ದ ರಾಜಾ, ಕೆಲ ಹೊತ್ತಿನಲ್ಲಿಯೇ ಸಂಸತ್ನಿಂದ ತೆರಳಿದರು.
ತಮಿಳುನಾಡಿನ ನೀಲಗಿರಿ ಕ್ಷೇತ್ರದ ಡಿಎಂಕೆ ಸಂಸದರಾಗಿರುವ ರಾಜಾ, 30 ಸಾವಿರ ಕೋಟಿ ರೂಪಾಯಿಗಳ 2ಜಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದರು.
ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದ ಬಳಿಕ ಹೊರ ಬಂದಿದ್ದಾರೆ.