ಬೆಂಗಳೂರು: ಶಿಲ್ಪದಲ್ಲಿ ಕೆತ್ತಿದಂತಿರುವ ಗಣಪತಿ, ನೀರನ್ನು ಸುರಿಯುತ್ತಿರುವ ಮಹಿಳೆ, ಶೃಂಗಾರದ ರಸಗಳಿಗೆಯಲ್ಲಿ ಮೈಮರೆತಿರುವ ಯುವತಿ, ಸ್ನಿಗ್ಧತೆಯನ್ನು ತೋರುತ್ತಿರುವ ಬುದ್ಧ, ಕೃಷ್ಣನ ಕೊಳಲವಾದನವನ್ನು ಆಲಿಸುತ್ತಾ ಮೈಮರೆತಿರುವ ರಾಧೆ–
ಹೀಗೆ ಅನೇಕ ಸುಂದರ ಕಲಾಕೃತಿಗಳನ್ನು ಬಳಸಿ ತಯಾರಿಸಿರುವ ಕ್ಯಾಲೆಂಡರ್ ಅನ್ನು ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ‘ಮಾಸ್ಟರ್ ಕಿಚನ್ ಅಪ್ಲಯನ್ಸಸ್’ ಹೊರ ತಂದಿದೆ.
ನಗರದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬನ್ಸಾಲಿ, ‘ಪ್ರತಿಭಾವಂತ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕ್ಯಾಲೆಂಡರ್ ಹೊರತಂದಿದ್ದೇವೆ’ ಎಂದರು.
‘ಹಲವಾರು ವರ್ಷಗಳ ಪರಿಶ್ರಮದಿಂದ ಚಿತ್ರಕಲೆಯನ್ನು ಕಲಿತಿರುವ ಹಲವಾರು ಕಲಾವಿದರುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ದೊರೆತಿರುವುದಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಜೀವನ ನಿರ್ವಹಣೆಯ ಕಷ್ಟ ಹಲವರನ್ನು ಚಿತ್ರಕಲೆಯನ್ನು ಬಿಟ್ಟು ಬೇರೆ ಬೇರೆ ಉದ್ಯೋಗ ಅರಸಿಕೊಳ್ಳುವ ಅನಿವಾರ್ಯತೆಗೆ ದೂಡುತ್ತದೆ’ ಎಂದು ಅವರು ವಿಷಾದಿಸಿದರು.