ಗಜೇಂದ್ರಗಡ: ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಅನಾರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿ ರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ರೋಣ ತಾಲ್ಲೂಕಿನ ಕೊಡಗಾನೂರ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮಸ್ಥರಲ್ಲಿ ಕಾಣಿಸಿಕೊಂಡ ವಾಂತಿ- ಭೇದಿ, ಚಳಿ ಜ್ವರ, ಸಂದು ನೋವು, ಮೈಕೈ ನೋವಿನ ಹಿನ್ನೆಲೆಯಲ್ಲಿ ಇದುವರೆಗೂ 64 ಜನ ಅಸ್ವಸ್ಥರಾಗಿ ಗಜೇಂದ್ರಗಡದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಗಿದ್ದಾರೆ. ಒಬ್ಬರನ್ನು ಧಾರವಾಡದ ಎಸ್ಡಿಎಂಸಿ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಗದಗ ಜರ್ಮನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಗಜೇಂದ್ರಗಡ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ 4 ಜನ ನುರಿತ ತಜ್ಞ ವೈದ್ಯರು, 12 ದಾದಿ ಯರು, 2 ಪ್ರಯೋಗಾಲಯ ತಂತ್ರಜ್ಞ ರು, ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕರು ಹಾಗೂ ಆಶಾಕಾರ್ಯ ಕರ್ತೆಯರನ್ನೊಳಗೊಂಡ 25 ಕ್ಕೂ ಅಧಿಕ ಸಿಬ್ಬಂದಿ ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿಗೆ ತರಾಟೆ: ಗಜೇಂದ್ರಗಡದ ಸರ್ಕಾರಿ ಸಮುದಾಯ ಆಸ್ಪತ್ರೆ ಆಗಮಿಸಿದ ಜಿಲ್ಲಾ ಆರೋಗ್ಯಾ ಧಿಕಾರಿ ಡಿ.ಬಿ.ಚನ್ನಶೆಟ್ಟಿ ಅವರನ್ನು ಕೊಡಗಾನೂರ ಗ್ರಾಮಸ್ಥರು, ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡರು.
ನೆರೆದಿದ್ದ ಜನಜಂಗುಳಿಯ ಆಕ್ರೋಶಕ್ಕೆ ತಬ್ಬಿಬ್ಬಾದ ಜಿಲ್ಲಾ ಆರೋಗ್ಯಾಧಿಕಾರಿ ಅಸ್ವಸ್ಥ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸ ಲಾಗುವುದು. ಇದರ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ ಎಂದು ವಿನಂತಿಸಿದರು.
ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ ಒಟ್ಟು 64 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆಯಿಂದ ಜನರು ಅಸ್ವಸ್ಥರಾಗಿದ್ದು ಕೆಲ ಗಂಟೆಗಳ ಬಳಿಕ ಸಹಜ ಸ್ಥಿತಿಯತ್ತ ಮರಳಲಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ಎಸ್.ಭಜಂತ್ರಿ `ಪ್ರಜಾವಾಣಿ'ಗೆ ತಿಳಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರ ಣಾಧಿಕಾರಿ ಡಾ.ಎಫ್.ಎಂ.ಸಾಲ ಗೌಡರ, ಡಾ.ಮಹೇಶ ಚೋಳಿನ, ಡಾ. ಮಲ್ಲಿಕಾರ್ಜುನ ಪೂಲೀಸ್ ಪಾಟೀಲ, ಡಾ.ಅಮೃತ ಹರಿದಾಸ, ಡಿ.ವಿ. ಬೆನ್ನೂರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.