ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆ ಅಡಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಮಗಾರಿ ಭರದಿಂದ ಸಾಗಿದೆ.
ಬನಹಟ್ಟಿಯ ಆರನೇ ವಾರ್ಡಿನಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಹಾಗೂ ಅವೈಜ್ಞಾನಿಕವಾಗಿ ಕಟ್ಟುತ್ತಿರುವ ಕಾಮಗಾರಿಯನ್ನು ನಗರಸಭೆಯ ಸದಸ್ಯ ರಾಜಶೇಖರ ಸೋರಗಾಂವಿ ಗಮನಿಸಿ, ಈ ಕುರಿತು ನಗರಸಭೆಯ ಅಧಿಕಾರಿಗಳ ಗಮನ ಸೆಳೆದಾಗ ಪೌರಾಯುಕ್ತ ಆರ್.ಎಂ. ಕೊಡುಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸಿ ಅದನ್ನು ಸಂಪೂರ್ಣವಾಗಿ ಒಡೆದು ಹಾಕಿ ಬೇರೆಯದನ್ನು ನಿರ್ಮಿಸಲು ಸೂಚಿಸಿದ ಘಟನೆ ನಡೆಯಿತು.
ಕಾಮಗಾರಿಯನ್ನು ಪರಿಶೀಲಿಸಿದ ನಂತರ ಈ ರೀತಿ ಕೆಲಸ ಮಾಡುವುದಾದರೆ ಮಾಡಲೇ ಬೇಡಿ, ಇದು ಶಾಶ್ವತ ಯೋಜನೆಯಾಗಿದ್ದು ಇಂಥ ಕಳಪೆ ಕಾಮಗಾರಿ ಸರಿಯಲ್ಲ, ಕೂಡಲೇ ಕಟ್ಟಿದ್ದ ಕಾಮಗಾರಿಯನ್ನು ಒಡೆದು ಹಾಕಿ ಹೊಸದಾಗಿ ನಿರ್ಮಿಸಲು ಆಯುಕ್ತರು ತಿಳಿಸಿದರು.
ನಗರಸಭೆಯ ಉಪಾಧ್ಯಕ್ಷ ಶ್ರೀಶೈಲ ಭಾವಿಕಟ್ಟಿ, ಅಧಿಕಾರಿ ಎಸ್.ಎಂ. ಮಾತಾಳಿ ಈ ಸಂದರ್ಭದಲ್ಲಿಶ್ರಿದ್ದರು.
ಈ ಕುರಿತು ಮಾತನಾಡಿದ ನಗರಸಭೆಯ ಸದಸ್ಯ ರಾಜಶೇಖರ ಸೋರಗಾಂವಿ, ಇಲ್ಲಿ ನಡೆಸುತ್ತಿರುವ ಕಾಮಗಾರಿ ಪೂರ್ತಿ ಕಳಪೆ ಮಟ್ಟದ್ದು ಮತ್ತು ಅವೈಜ್ಞಾನಿಕತೆವಾಗಿದೆ.
ಇಲ್ಲಿರುವ ಕಾಂಕ್ರೀಟ್ನಲ್ಲಿ ಸರಿಯಾದ ಪ್ರಮಾಣದ ಕಡಿ, ಮರಳು ಮತ್ತು ಸಿಮೆಂಟ್ ಅಂಶ ಅತ್ಯಂತ ಕಡಿಮೆ ಇರುವುದರಿಂದ ಕಟ್ಟಿದ್ದ ಇಟ್ಟಿಗೆಗಳನ್ನು ಬಿಡಿಸಿದಾಗ ಅವುಗಳಿಗೆ ಯಾವುದೇ ರೀತಿಯ ಸಿಮೆಂಟ್ ಹತ್ತಿರುವ ಅಂಶ ಕಂಡು ಬರಲಿಲ್ಲ. ಇಟ್ಟಿಗೆಗಳು ಸರಾಗವಾಗಿ ಕಳಚಿ ಬಂದವು. ಈ ಯೋಜನೆಯು ನಗರದ ಬಹುತೇಕ ಪ್ರದೇಶಗಳಲ್ಲಿ ನಡೆದಿದ್ದು ಸಾರ್ವಜನಿಕರು ತಮ್ಮ ಓಣಿಗಳಲ್ಲಿ ನಡೆದ ಕಾಮಗಾರಿಯ ಬಗ್ಗೆ ಸರಿಯಾದ ರೀತಿಯಲ್ಲಿ ವಿಚಾರಿಸಬೇಕು ಎಂದು ತಿಳಿಸಿದರು.