ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಕಳಪೆ ಗುಣಮಟ್ಟದ ಬೀಜದಿಂದಾಗಿ ಟೊಮೆಟೊ ಬೆಳೆಯಲ್ಲಿ ಅಪಾರ ನಷ್ಟ ಹೊಂದಿರುವ ಘಟನೆ ಬೆಳಕಿಗೆ ಬಂದಿದೆ.ಬಾಗೇಪಲ್ಲಿಯ ಗೂಳೂರು ವೃತ್ತದಲ್ಲಿರುವ ಖಾಸಗಿ ಕಂಪೆನಿಯೊಂದರ ಟೊಮೆಟೊ ಬಿತ್ತನೆ ಬೀಜಗಳನ್ನು ಸುಮಾರು 100 ಎಕರೆ ಪ್ರದೇಶದಲ್ಲಿ ಬಿತ್ತಿದ್ದು, ಫಸಲು ಸಿಗದೇ ಕಂಗಾಲಾಗಿದ್ದೇವೆ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.
‘ಸುಮಾರು 6 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಗುಣಮಟ್ಟದ ಬೀಜಗಳು ಎಂದು ನಂಬಿಸಿ ರೈತರನ್ನು ವಂಚಿಸಿದವರನ್ನು ಶಿಕ್ಷಿಸಬೇಕು.ಕೃಷಿ ಅಥವಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ರೈತರಿಗೆ ನಷ್ಟ ಪರಿಹಾರ ಒದಗಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಹೇಳಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕೆ.ಗೋವಿಂದರಾಜು, ರೈತರಾದ ಎಸ್.ಜಿ.ಗಣೇಶ್, ಮುನಿಯಪ್ಪ, ವಿ.ಗಂಗಾಧರಮೂರ್ತಿ, ಡಿ.ವಿ.ಲಕ್ಷ್ಮಿನಾರಾಯಣ, ನಾರಾಯಣಪ್ಪ ಮತ್ತಿತರರು ಬೆಂಬಲ ವ್ಯಕ್ತಪಡಿಸಿದ್ದಾರೆ.