ಚಿತ್ರದುರ್ಗ: ವಾಹನ ಕಳ್ಳತನ ತಡೆಯಲು ಲಾಕಿಂಗ್ ವಿನ್ಯಾಸ ಬದಲಾಯಿಸುವಂತೆ ಕಂಪೆನಿಗಳಿಗೆ ಪತ್ರ ಬರೆಯಲಾಗುವುದು ಮತ್ತು ಕುಖ್ಯಾತ ಕಳ್ಳರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗುವುದು ಎಂದು ಪೂರ್ವ ವಲಯ ಐಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಕಚೇರಿ ಕಟ್ಟಡದಲ್ಲಿ ಸೋಮವಾರ ನಡೆದ ವಾಹನ ಕಳವು ಪ್ರಕರಣಗಳ ಬಗ್ಗೆ ಅಂತರ್ಜಿಲ್ಲಾ ಸಮಾವೇಶ ಮತ್ತು ಗಡಿ ಅಪರಾಧ ಸಭೆಯ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಹಲವು ಅಪರಾಧಿಗಳು ಸ್ಥಳೀಯವಾಗಿ ಯಾವುದೇ ಕೃತ್ಯಗಳನ್ನು ಎಸಗುತ್ತಿಲ್ಲ. ಬೇರೆ ಸ್ಥಳಗಳಲ್ಲಿ ಅಪರಾಧ ಎಸಗುತ್ತಿದ್ದು, ಸ್ಥಳೀಯವಾಗಿ ಉತ್ತಮ ಅಭಿಪ್ರಾಯ ಬೆಳೆಸಿಕೊಂಡ ಉದಾಹರಣೆಗಳಿವೆ. ಕುಖ್ಯಾತ ತಂಡಗಳಲ್ಲಿ ಅಂತರ್ರಾಜ್ಯ ಗ್ಯಾಂಗ್ಗಳು ಸೇರಿಕೊಂಡಿವೆ. ಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರಮುಖವಾಗಿ ಚರ್ಚೆಯಾಯಿತು ಎಂದು ಮಾಹಿತಿ ನೀಡಿದರು.
ಹೊಸ ವಾಹನಗಳನ್ನು ಕದಿಯಲಾಗುತ್ತದೆ. ಕೇವಲ ಒಂದು ವರ್ಷದ ವಾಹನವನ್ನು ಸಹ ನಕಲಿ ಬೀಗ ಬಳಸಿ ಕದಿಯಬಹುದಾಗಿದೆ. ಆದ್ದರಿಂದ ಲಾಕಿಂಗ್ ವ್ಯವಸ್ಥೆಯ ತಂತ್ರಜ್ಞಾನ ವಿನ್ಯಾಸವನ್ನು ಬದಲಾಯಿಸುವಂತೆ ಕಂಪೆನಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಇತ್ತೀಚೆಗೆ ಅಪರಾಧ ಕೃತ್ಯಗಳು ಹೊಸ ರೀತಿಯಲ್ಲಿ ನಡೆಯುತ್ತಿವೆ. ಕೆಲವರು ಆಕರ್ಷಕ ಬಹುಮಾನ ನೀಡುತ್ತೇವೆ ಎಂದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಕಲಿ ಚಿನ್ನದ ಪ್ರಕರಣಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂದರು.
ತುಮಕೂರು, ಚಿತ್ರದುರ್ಗ, ರಾಯಚೂರು, ಕೊಪ್ಪಳ, ಉಡುಪಿ, ಕಾರವಾರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.