ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಚೆಲ್ಲಿದರೆ ದಂಡ, ಬಂಧನ: ಪ್ರಚಾರ ಶುರು

Last Updated 11 ಡಿಸೆಂಬರ್ 2013, 9:05 IST
ಅಕ್ಷರ ಗಾತ್ರ

ಮಂಗಳೂರು: ಕಸ ನಿರ್ವಣೆಯಲ್ಲಿ ಜನ­ಸಾಮಾನ್ಯರಿಗೆ ಸಹ ಹೊಣೆಗಾರಿಕೆಯನ್ನು ವಹಿ­ಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕರ್ನಾಟಕ ಪೌರನಿಗಮಗಳ (ತಿದ್ದು­ಪಡಿ) ಕಾಯ್ದೆ 2013 ಅನ್ನು ಜಾರಿಗೆ ತರಲು ನಿರ್ಧರಿ­ಸಿದ್ದು, ಅದಕ್ಕೆ ಮೊದಲಾಗಿ ಜನರಿಗೆ ಮಾಧ್ಯಮಗಳ ಹಾಗೂ ಭಿತ್ತಿಪತ್ರಗಳ ಮೂಲಕ ಪ್ರಚಾರ ಕಾರ್ಯಕ್ಕೆ ಮುಂದಾಗಿದೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಪಾಲಿಕೆ ಆಯುಕ್ತ ಅಜಿತ್ ಕುಮಾರ್‌ ಹೆಗ್ಡೆ ಶಾನಾಡಿ ಅವರು ಪತ್ರಿಕಾಗೋಷ್ಠಿ ನಡೆಸಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಬಗ್ಗೆ ವಿವರ ನೀಡಿದರು. ಜನರು ಕಸ ವಿಂಗಡಿಸಿ ಕಸ ಸಂಗ್ರಹಿಸುವವರಿಗೆ ನೀಡದಿದ್ದರೆ ಮತ್ತು ಎಲ್ಲೆಂದರಲ್ಲಿ ಕಸ ಎಸೆದರೆ,
ರಸ್ತೆ, ಆಟದ ಮೈದಾನ, ಉದ್ಯಾನ, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಮಲ, ಮೂತ್ರ ವಿಸರ್ಜಿಸಿದರೆ ಮೊದಲ ಬಾರಿಯ ತಪ್ಪಿಗೆ ₨ 100, 2ನೇ ಬಾರಿಯ ತಪ್ಪಿಗೆ ₨ 200 ದಂಡ ವಿಧಿಸಬಹುದು.

ಕಸ ವಿಂಗಡಿಸಿ ನೀಡದಿದ್ದರೆ ಮೊದಲ ತಪ್ಪಿಗೆ ₨ 100, ದೊಡ್ಡ ಪ್ರಮಾಣದಲ್ಲಿ ಕಸ ಉತ್ಪಾದಿಸು­ವರಿಗೆ ₨ 500 ದಂಡ ವಿಧಿಸಬಹುದು. ವ್ಯಕ್ತಿಗಳು ಅಥವಾ ದೊಡ್ಡ ಕಸ ಉತ್ಪಾದಕರು ಸತತ 5 ಬಾರಿ ಇಂತಹದೇ ತಪ್ಪು ಮಾಡಿದರೆ ಅವರನ್ನು ಬಂಧಿಸಿ ಗರಿಷ್ಠ 3 ತಿಂಗಳ ಕಾಲ ಜೈಲಿನಲ್ಲಿ ಇಡುವು­ದಕ್ಕೂ ಕಾಯ್ದೆಯಲ್ಲಿ ಅವಕಾಶ ಇದೆ ಎಂದು ಆಯುಕ್ತರು ವಿವರ ನೀಡಿದರು.

ಮೊದಲಿಗೆ ಸಾಧ್ಯವಾದ ಎಲ್ಲಾ ವಿಧಾನಗಳ ಮೂಲಕ ಜನರಿಗೆ ನೂತನ ಕಾಯ್ದೆಯ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಈ ಪತ್ರಿಕಾಗೋಷ್ಠಿ ಇಂತಹ ಪ್ರಯತ್ನಗಳಲ್ಲಿ ಮೊದಲನೆಯದು. ಈ ಹಿಂದಿನ ಪ್ರಯತ್ನಗಳಿಗೆ ಫಲ ದೊರಕದ್ದನ್ನು ಇನ್ನು ಮುಂದೆ ಪರಿಗಣಿಸದೆ ಹೊಸದಾಗಿ ಈ ಪ್ರಯತ್ನ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಯ್ದೆಯ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಲಿದೆ. ಇದಕ್ಕಾಗಿ ಮೂವರು ಆರೋಗ್ಯ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನೂ ನೀಡಲಾಗಿದೆ ಎಂದು ಅವರು ಹೇಳಿದರು.

ಕಸ ವಿಲೇವಾರಿಯಲ್ಲಿ ನಿಯಮ ಪಾಲಿಸದ ನಗರದ ನಾಲ್ಕು ಆಸ್ಪತ್ರೆಗಳು ಮತ್ತು ಒಂದು ವಾಣಿಜ್ಯ ಘಟಕಕ್ಕೆ ಈಗಾಗಲೇ ದಂಡ ವಿಧಿಸ­ಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮನೆ ಮನೆಯಿಂದ ಕಸ ಸಂಗ್ರಹ

ಎಂಟು ಪ್ಯಾಕೇಜ್‌ಗಳ ಕಸ ಸಂಗ್ರಹ ಯೋಜನೆಯಂತೆ ನಗರದ ಕನಿಷ್ಠ ಶೇ 75ರಷ್ಟು ಭಾಗದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಚ್ಚನಾಡಿಗೆ ಕಸ ಸಾಗಿಸಲು 31 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅವುಗಳಿಗೆ ಜಿಪಿಎಸ್‌ ಅಳಡಡಿಸಲಾಗಿದೆ. ಸದ್ಯಕ್ಕೆ ಉಳ್ಳಾಲ, ಬಂಟ್ವಾಳ, ಮೂಡುಬಿದಿರೆಗಳಿಂದ ಟನ್‌ಗೆ ₨ 250 ಶುಲ್ಕ ಪಡೆದು ಕಸ ಪಡೆಯಲಾಗುತ್ತಿದೆ ಎಂದ ಜಂಟಿ ಆಯುಕ್ತರಾದ ಪ್ರಮೀಳಾ ಹೇಳಿದರು. ಡೆಂಗೆ, ಮಲೇರಿಯ ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಆಯುಕ್ತರು ಮಾಹಿತಿ ನೀಡಿದರು.

ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ದಂಡ ವಿಧಿಸುವ ಅಧಿಕಾರ ಪಡೆದುಕೊಂಡಿರುವ ಆರೋಗ್ಯ ಅಧಿಕಾರಿಗಳಾದ ಮಂಜುನಾಥ ಶೆಟ್ಟಿ, ಮಧು, ಮನುಕುಮಾರ್‌ ಇತರರು ಪತ್ರಿಕಾ­ಗೋಷ್ಠಿ­ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT