ಜೈಪುರ (ಪಿಟಿಐ): ಐಪಿಎಲ್ ‘ಸ್ಪಾಟ್ ಫಿಕ್ಸಿಂಗ್’ ವಿವಾದವನ್ನು ರಾಜಸ್ತಾನ ರಾಯಲ್ಸ್ ತಂಡಕ್ಕೆ ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಈ ತಂಡದ ನಾಲ್ವರು ಆಟಗಾರರು ‘ಸ್ಪಾಟ್ ಫಿಕ್ಸಿಂಗ್’ ಪ್ರಕರಣದಲ್ಲಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದರು.
ಆದರೆ ಈ ಕಹಿ ಘಟನೆಯನ್ನು ತಂಡದ ಆಟಗಾರರು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ. ‘ಐಪಿಎಲ್ ವೇಳೆ ನಡೆದ ಕಹಿ ಘಟನೆ ಯನ್ನು ಆ ಟೂರ್ನಿ ಕೊನೆಗೊಳ್ಳುವ ವೇಳೆಯೇ ಮರೆತಿದ್ದೇವೆ. ಇದೀಗ ಮುಂದಿನ ಸವಾಲನ್ನು ಮಾತ್ರ ಎದುರುನೋಡುತ್ತಿದ್ದೇವೆ’ ಎಂದಿದ್ದಾರೆ.
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯ ದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಪಡೆದ ಬಳಿಕ ದ್ರಾವಿಡ್ ಹೀಗೆ ಹೇಳಿದ್ದಾರೆ. ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ಸ್ ಏಳು ವಿಕೆಟ್ಗಳ ಜಯ ಸಾಧಿಸಿತ್ತು.
‘ಚಾಂಪಿಯನ್ಸ್ ಲೀಗ್ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ ನಾವು ಮತ್ತೆ ಒಂದುಗೂಡಿದಾಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ಮಾತನಾಡಿದ್ದೇವೆ. ಆ ಘಟನೆಯನ್ನು ಮರೆತು ಮುಂದಿನ ಸವಾಲಿನ ಬಗ್ಗೆ ಗಮನ ಹರಿಸಲು ಎಲ್ಲರೂ ನಿರ್ಧರಿಸಿದ್ದೇವೆ. ಈ ಟೂರ್ನಿ ಯಲ್ಲಿ ಉತ್ತಮ ಪ್ರದರ್ಶನ ನೀಡು ವುದು ನಮ್ಮ ಗುರಿ’ ಎಂದು ತಿಳಿಸಿದ್ದಾರೆ.
ಇಂಡಿಯನ್ಸ್ ವಿರುದ್ಧದ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕದ ಬ್ಯಾಟ್ಸ್ಮನ್, ‘ಮುಂಬೈ ಬಲಿಷ್ಠ ತಂಡ. ಅಂತಹ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಲು ಸಾಧ್ಯವಾಗಿರುವುದು ಸಂತಸದ ವಿಷಯ. ರನ್ ಬೆನ್ನಟ್ಟುವ ವೇಳೆ ನಮ್ಮ ತಂಡದ ಬ್ಯಾಟ್ಸ್ಮನ್ಗಳು ತಾಳ್ಮೆ ವಹಿಸಿದರು. ಒತ್ತಡಕ್ಕೆ ಒಳಗಾಗಲಿಲ್ಲ’ ಎಂದು ನುಡಿದಿದ್ದಾರೆ.
‘ಮಳೆ ಬಂದಿದ್ದ ಕಾರಣ ಪಿಚ್ಅನ್ನು ಇಡೀ ದಿನ ಕವರ್ನಿಂದ ಮುಚ್ಚಲಾ ಗಿತ್ತು. ಪಿಚ್ನ ಪರಿಸ್ಥಿತಿ ವೇಗದ ಬೌಲರ್ಗಳಿಗೆ ನೆರವು ನೀಡುವಂತೆ ಇತ್ತು. ಈ ಕಾರಣ ಅಂತಿಮ ಇಲೆವೆನ್ ನಲ್ಲಿ ಸ್ಪಿನ್ನರ್ಗಳಿಗೆ ಸ್ಥಾನ ನೀಡಲಿಲ್ಲ’ ಎಂದು ದ್ರಾವಿಡ್ ಹೇಳಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 7 ವಿಕೆಟ್ಗೆ 142 (ಸಚಿನ್ ತೆಂಡೂಲ್ಕರ್ 15, ರೋಹಿತ್ ಶರ್ಮ 44, ಕೀರನ್ ಪೊಲಾರ್ಡ್ 42, ವಿಕ್ರಮ್ಜೀತ್ ಮಲಿಕ್ 24ಕ್ಕೆ 3); ರಾಜಸ್ತಾನ ರಾಯಲ್ಸ್: 19.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 (ರಹಾನೆ 33, ಸಂಜು ಸ್ಯಾಮ್ಸನ್ 54, ಶೇನ್ ವಾಟ್ಸನ್ ಔಟಾಗದೆ 27, ಸ್ಟುವರ್ಟ್ ಬಿನ್ನಿ ಔಟಾಗದೆ 27). ಪಂದ್ಯ ಶ್ರೇಷ್ಠ: ವಿಕ್ರಮಾಜಿತ್ ಸಿಂಗ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.