ನವದೆಹಲಿ (ಪಿಟಿಐ): ಭಾನುವಾರ ಹೊರಬಿದ್ದ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಶೋಚನೀಯ ಸ್ಥಿತಿ ವ್ಯಕ್ತವಾದ ಬೆನ್ನಲ್ಲೇ ಎನ್ಸಿಪಿ ಮುಖ್ಯಸ್ಥ ಹಾಗೂ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕತ್ವ ದುರ್ಬಲ ಎಂದು ಅಪಸ್ವರ ಎತ್ತಿದ್ದಾರೆ.
‘ಜನತೆಗೆ ದುರ್ಬಲ ನಾಯಕರ ಅಗತ್ಯವಿಲ್ಲ. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರಂತಹ ಸದೃಢ ಹಾಗೂ ನಿರ್ಧಾರಕ ಶಕ್ತಿಯ ನಾಯಕರನ್ನು ಅವರು ಬಯಸುತ್ತಾರೆ. ಯುವಜನತೆಯು ಕಾಂಗ್ರೆಸ್ ವಿರುದ್ಧದ ಆಕ್ರೋಶವನ್ನು ಮತದ ಮೂಲಕ ಹೊರಹಾಕಿದೆ’ ಎಂದು ಅವರು ಹೇಳಿದ್ದಾರೆ.
‘ಫಲಿತಾಂಶದಿಂದ ಉದ್ಭವಿಸಿರುವ ಗಂಭೀರ ಪ್ರಶ್ನೆಗಳು ಕಾಂಗ್ರೆಸ್ಗೆ ಮಾತ್ರ ಅನ್ವಯಿಸುವುದಿಲ್ಲ. ನಮ್ಮೆಲ್ಲರಿಗೂ ಇದು ಅನ್ವಯವಾಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಜನತೆಗೆ ದುರ್ಬಲ ನಾಯಕರು ಬೇಕಾಗಿಲ್ಲ. ಬಡವರಿಗಾಗಿ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಅವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವವರು ಬೇಕಾಗಿದೆ’ ಎಂದು ಪವಾರ್ ಹೇಳಿದ್ದಾರೆ.
‘ಸೋಲಿಗೆ ಹಲವು ಕಾರಣ’
ಅಗತ್ಯ ವಸ್ತುಗಳ ಬೆಲೆ ಏರಿಕೆ, ಈರುಳ್ಳಿ ಬೆಲೆ ಕೆ.ಜಿ.ಗೆ 100ರೂ ಆಗಿದ್ದು, ಭ್ರಷ್ಟಾಚಾರ ಸೇರಿದಂತೆ ಅನೇಕ ಸಂಗತಿಗಳು ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿವೆ ಎಂದು ಕೇಂದ್ರ ಸಚಿವರೂ ಆದ ನ್ಯಾಷನಲ್ ಕಾನ್ಫರೆನ್್ಸ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಆದರೆ ಜನತೆ ರಾಹುಲ್ ಗಾಂಧಿ ವಿರುದ್ಧ ತೀರ್ಪು ನೀಡಿದ್ದಾರೆಂಬ ವಿಶ್ಲೇಷಣೆಗಳನ್ನು ಅವರು ಅಲ್ಲಗಳೆದಿದ್ದಾರೆ.