ಒಬ್ಬ ಯೋಧ ಅತಿ ಎತ್ತರದ ಪ್ರದೇಶದಲ್ಲಿ ಅಥವಾ ಅತಿ ಉಷ್ಣ ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಿರ್ವಹಿಸಬೇಕಾದರೆ ಆತನ ಮನಃಸ್ಥಿತಿ ಮುಖ್ಯವಾಗಿರುತ್ತದೆ. ಮನಸ್ಸು ನಿರಾಳವಾಗಿದ್ದರೆ ಮಾತ್ರ ಆತ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬಲ್ಲ ಎನ್ನುವುದು ಸರ್ವ ವಿಧಿತ.
ಈ ನಿಟ್ಟಿನಲ್ಲಿ ಭಾರತೀಯ ಸೇನಾಪಡೆಗಳ ಮನಃಸ್ಥಿತಿ ಅರಿತು ನೂತನ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಮಾಡುವ ಸಲುವಾಗಿಯೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿ.ಆರ್.ಡಿ.ಒ) ನಮ್ಮ ಜೆ.ಎಸ್.ಎಸ್ ವಿಶ್ವವಿದ್ಯಾಲಯದೊಂದಿಗೆ ಒಂದು ಮಹತ್ತರವಾದ ಒಡಂಬಡಿಕೆಯನ್ನು ಕಳೆದ ವರ್ಷ ಮಾಡಿಕೊಂಡಿದೆ.
ಇದಕ್ಕೆ ಪೂರಕವಾದ ಸಂಶೋಧನೆಗಳನ್ನು ಕೈಗೊಳ್ಳಲು ಅನುವಾಗುವಂತೆ ಎಂ.ಎಸ್.ಸಿ (ಕಾಗ್ನಿಟಿವ್ ಸೈನ್ಸ್) ಎಂಬ ನಾಲ್ಕು ಸೆಮಿಸ್ಟರ್ಗಳನ್ನು ಒಳಗೊಂಡ ಎರಡು ವರ್ಷದ ನೂತನ ಕೋರ್ಸ್ 2012-13ನೇ ಸಾಲಿನಿಂದ ವಿದ್ಯಾಲಯದಲ್ಲಿ ಪ್ರಾರಂಭವಾಗಲಿದೆ.
ಈ ಕೋರ್ಸ್ನ ಪ್ರವೇಶಕ್ಕೆ ಅರ್ಹತೆ ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ವಿಜ್ಞಾನದಲ್ಲಿ ಅಥವಾ ಬಿ.ಎ (ಮನಃಶಾಸ್ತ್ರ) ಪದವೀಧರರಾಗಿರಬೇಕು. ಇಲ್ಲಿ ಎಂ.ಎಸ್.ಸಿ ಪದವಿ ಪಡೆಯುವವರಿಗೆ ಸೇನೆಯ ಸಂಶೋಧನೆ ಮತ್ತು ತಂತ್ರಜ್ಞಾನ, ವಿ.ವಿಗಳಲ್ಲಿ ಬೋಧನೆ, ಮಾನವ ಸಂಪನ್ಮೂಲ ಮತ್ತು ಇತರ ಸರ್ಕಾರಿ ಕೆಲಸಗಳು ದೊರೆಯುವ ಸಾಧ್ಯತೆ ಇರುತ್ತದೆ.
ಏಕೆಂದರೆ, ಮನಃಸ್ಥಿತಿ ಕೇವಲ ಸೇನೆಗೆ ಸೀಮಿತವಾಗಿರದೆ, ಐ.ಟಿ ವಲಯ, ಕೃಷಿ ಹಾಗೂ ಇತರ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಉಜ್ವಲ ಭವಿಷ್ಯ ಇರುವ ಈ ರೀತಿಯ ಶಿಕ್ಷಣ ದೇಶದಲ್ಲಿ ಬೆರಳೆಣಿಕೆಯ ವಿದ್ಯಾಸಂಸ್ಥೆಗಳಲ್ಲಿ ಮಾತ್ರ ಇದೆ.
`ಈ ಹೊಸ ಕೋರ್ಸ್ನ ಮೂಲಕ ಹಲವಾರು ಕ್ರಾಂತಿಕಾರಕ ಸಂಶೋಧನೆಗಳಿಗೆ ಡಿಆರ್ಡಿಒ ಬೆಂಬಲ ನೀಡುತ್ತದೆ~ ಎಂದು ಸಂಸ್ಥೆಯ ಮುಖ್ಯ ನಿಯಂತ್ರಕ (ಸಂಶೋಧನೆ ಮತ್ತು ಅಭಿವೃದ್ಧಿ) ಡಾ. ಸೆಲ್ವಮೂರ್ತಿ ಅವರು ಹೇಳಿರುವುದು ಆಶಾದಾಯಕ ಬೆಳವಣಿಗೆ. ಇದು ವಿಜ್ಞಾನ ಪದವಿ ಮುಗಿಸಿ ಮುಂದೇನು ಎಂದು ಯೋಚಿಸುವವರಿಗೆ ಉತ್ತರವಾಗಬಲ್ಲದು.