ಬಾಗಲಕೋಟೆ: ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಗಾಗಿ ಪ್ರತಿವರ್ಷ ನಡೆಸುತ್ತಿರುವ ಪುನಶ್ಚೇತನ ಕಾರ್ಯಾಗಾರದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ, ಇದು ಕೇವಲ ಕಾಟಾಚಾರಕ್ಕೆ ನಡೆಸುವ ತರಬೇತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅಸಮಾಧಾನ ವ್ಯಕ್ತಪಡಿಸಿದರು.
ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಗಾಗಿ ಸರ್ಕಾರಿ, ಅನುದಾನಿತ ಪ್ರೌಢಶಾಲೆಯ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ಶಿಕ್ಷಕರಿಗೆ ಎರಡು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಾಲೆಗಳೇ ಹೆಚ್ಚಿನ ಪ್ರಗತಿ ಯನ್ನು ಸಾಧಿಸಿದೆ ಎಂದರು.
ಪಠ್ಯ ಪುಸ್ತಕ ಹೊರತರುವ ಮುನ್ನ ಶಿಕ್ಷಕರಿಗೆ ಪುಸ್ತಕದ ಸಮಗ್ರ ಮಾಹಿತಿಯನ್ನು ನೀಡುವುದು ಅವಶ್ಯಕವಾಗಿದೆ. ಮುಂದಿನ ದಿನದಲ್ಲಿ ಪಠ್ಯಪುಸ್ತಕ ಹೊರತರುವ ಪೂರ್ವದಲ್ಲಿಯೇ ಶಿಕ್ಷಕರ ಮಾರ್ಗದರ್ಶನ ಪಡೆಯಲಾಗುವುದು ಹೇಳಿದರು. ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ಇಂತಹ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಹಣಕಾಸಿನ ವ್ಯವಹಾರ ಇರುವುದರಿಂದ ಲೆಕ್ಕೆಪತ್ರಗಳ ಸಂಶೋಧನೆ ನಡೆಸುವರೆಂಬ ಭಯದಿಂದ ಡಯಟ್ ಅಧಿಕಾರಿಗಳು ರಾಜಕಾರಣಿಗಳನ್ನು ಸಿಒಡಿ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಹೇಳಿದರು.
ಫಲಿತಾಂಶದಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಶಾಲೆಗಳ ಮತ್ತು ಶಿಕ್ಷಕರ ವೇತನ ಕಡಿತಗೊಳಿಸಲಾಗುವುದು ಎಂಬ ಆದೇಶವನ್ನು ಹೊರ ತರಲಾಗಿತ್ತು. ತಾಂತ್ರಿಕ ತೊಂದರೆಗಳಿಂದ ಆದೇಶವನ್ನು ಹಿಂದಕ್ಕೆ ಪಡೆಯ ಲಾಯಿತು ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಶಿಕ್ಷಕರ ಬೋಧನೆ ಉತ್ತಮಮಟ್ಟದಿಂದ ಕೂಡಿದೆ. ಮುಂದಿನ ವರ್ಷ ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲಿದೆ ಎಂದು ಆಶಿಸಿದರು.