ಮಾಗಡಿ: ಸಾವನದುರ್ಗ ಅರಣ್ಯದ ಸುತ್ತಮುತ್ತಲ ಕಾಡಾನೆಗಳ ಉಪಟಳವನ್ನು ಶಾಶ್ವತವಾಗಿ ತಡೆಗಟ್ಟಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ಕನ್ನಡಪರ ಆಟೊ ರಿಕ್ಷಾ ಚಾಲಕರ ಸಂಘದ ವತಿಯಿಂದ ವಲಯ ಅರಣ್ಯ ಅಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಯಿತು.
ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ವಿಪರೀತ ಕಾಟ ಕೊಡುತ್ತಿವೆ. ಇದರಿಂದ ಸಾರ್ವಜನಿಕರು ಭೀತಿಯಿಂದ ಜೀವನ ಸಾಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಕಷ್ಟ ತೋಡಿಕೊಂಡರು. ಇದೇ ವೇಳೆ ಕಾಡಾನೆಗಳ ದಾಳಿಯಿಂದ ಮೃತಪಟ್ಟಿರುವ ಕೆ.ವಿ.ತಾಂಡಾದ ರಾಜಾ ನಾಯ್ಕ ಬಂಧುಗಳಿಗೆ ಪರಿಹಾರ ದೊರಕಿಸಿ ಕೊಡುವಂತೆಯೂ ಆಗ್ರಹಿಸಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಸಬ್ ಇನ್ಸ್ಪೆಕ್ಟರ್ ವಿನಯ್ ಭಟ್ ಪ್ರತಿಭಟನಾಕಾರರನ್ನು ಸಮಾಧನಪಡಿಸಿ ಕಚೇರಿಯ ಬೀಗ ತೆಗೆಸಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ ಗೌಡ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ರಾಮು ಹಾಗೂ ವೇದಿಕೆಯ ಸದಸ್ಯರು ಮತ್ತು ಆಟೊ ರಿಕ್ಷಾ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪರಿಹಾರ: ಪ್ರತಿಭಟನಾನಿರತರನ್ನು ಭೇಟಿ ಮಾಡಿದ ವಲಯ ಅರಣ್ಯ ಅಧಿಕಾರಿ ಕೆಂಪರಾಜು ಮಾತನಾಡಿ, ಆನೆಯ ದಾಳಿಯಿಂದ ಮೃತ ಪಟ್ಟಿರುವ ರಾಜಾನಾಯ್ಕನಿಗೆ ಸಂಬಂದಿಸಿದ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಇನ್ನೊಂದು ವಾರದ ಒಳಗೆ ಪರಿಹಾರದ ಮೊತ್ತ 5 ಲಕ್ಷ ರೂಪಾಯಿಗಳನ್ನು ಮೃತನ ಬಂಧುಗಳಿಗೆ ನೀಡಲಾಗುವುದು ಎಂದರು. ಈಗಾಗಲೇ ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ತುರ್ತು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.