ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಣ್ಣೂರಿಗೆ ತೆರಳುವ ರಾತ್ರಿ ರೈಲನ್ನು ಬುಧವಾರದಿಂದಲೇ ಕಾರವಾರಕ್ಕೆ ವಿಸ್ತರಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ಹೈಕೋರ್ಟ್ಗೆ ತಿಳಿಸಿದರು.
ಬೆಂಗಳೂರು - ಕಣ್ಣೂರು ರೈಲನ್ನು ರದ್ದು ಮಾಡಿ, ಅದನ್ನು ಕಾರವಾರಕ್ಕೆ ಓಡಿಸಬೇಕು ಎಂದು ಕೋರಿ ಶಂಕರ ಎಸ್. ಭಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಅಧಿಕಾರಿಗಳು ಈ ವಿಷಯ ತಿಳಿಸಿದರು.
ಬೆಂಗಳೂರಿನಿಂದ ಮಂಗಳೂರಿನವರೆಗೆ 18 ಬೋಗಿಗಳನ್ನು ಹೊಂದಿರುವ ರಾತ್ರಿ ರೈಲು ಓಡಿಸಲಾಗುತ್ತದೆ. ರೈಲನ್ನು ಮಂಗಳೂರಿನಲ್ಲಿ ವಿಭಜಿಸಿ, ಐದು ಬೋಗಿಗಳನ್ನು ಕಣ್ಣೂರಿಗೆ ಹಾಗೂ 13 ಬೋಗಿಗಳನ್ನು ಕಾರವಾರಕ್ಕೆ ಓಡಿಸಲಾಗುವುದು ಎಂದು ಹೇಳಿದರು.