ಮಂಗಳೂರು: ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ಫೆಬ್ರುವರಿ 20 ಮತ್ತು 21ರಂದು ನಡೆಸಲು ಉದ್ದೇಶಿಸಿರುವ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂಬ ಸಂದೇಶ ನೀಡುವ ಸಲುವಾಗಿ ಬುಧವಾರ ವಿವಿಧ ಕಾರ್ಮಿಕ ಸಂಘಟನೆಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ, ಮುತ್ತಿಗೆ ಮತ್ತು ಜೈಲ್ ಭರೊ ನಡೆಯಿತು.
ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ನಾಯಕ ಬಿ.ಮಾಧವ ಅವರು, ಕಾರ್ಮಿಕರ ಕನಿಷ್ಠ ವೇತನವನ್ನು ಮಾಸಿಕ 10 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕಾರ್ಮಿಕ ಪರ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಟೀಕಿಸಿದರುಬಿಎಂಎಸ್ನ ವಿಶ್ವನಾಥ ಶೆಟ್ಟಿ, ಎಐಟಿಯುಸಿಯ ಶೇಖರ್, ಸಿಐಟಿಯುನ ವಸಂತ ಆಚಾರಿ, ಬಿಇಎಫ್ಐನ ಬಿ.ಎಂ.ಮಾಧವ ಇತರರು ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಕೆ.ಆರ್.ಶ್ರೀಯಾನ್, ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಶಿವಪ್ಪ, ಸೀತಾರಾಂ ಬೇರಿಂಜೆ, ಎಚ್.ವಿ.ರಾವ್, ವಿನೋದ್ ಕುಮಾರ್, ಪುರಂದರ ಇತರರು ನೇತೃತ್ವ ವಹಿಸಿದ್ದರು.