ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳ ರಕ್ಷಣೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಶ್ರಮಿಕಶಕ್ತಿ ಸಂಘಟನೆಯ ಸದಸ್ಯರು ಭಾನುವಾರ ನಗರದ ಬನಪ್ಪ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎಸ್. ಬಾಲನ್, `ದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪೆನಿಗಳು ಕಾರ್ಮಿಕರನ್ನು ಶೋಷಿಸುತ್ತಿವೆ. ರಾಜ್ಯದ 3.2 ಕೋಟಿ ಶ್ರಮಿಕರು ಹಲವಾರು ಉದ್ದಿಮೆಗಳಲ್ಲಿ ಅಸಂಘಟಿತರಾಗಿ ದುಡಿಯುತ್ತಿದ್ದಾರೆ. ಈ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು' ಎಂದು ಒತ್ತಾಯಿಸಿದರು.