ಶಹಾಪುರ: ಶಹಾಪುರ- ಗುಲ್ಬರ್ಗ ರಾಜ್ಯ ಹೆದ್ದಾರಿಯ ಮುಡಬೂಳ ಮುಖ್ಯ ಶಾಖಾ ಕಾಲುವೆ(ಎಂಬಿಸಿ)ಯಲ್ಲಿ ಶುಕ್ರವಾರ ಬೆಳಗಿನ ಜಾವ ಕಾರು ಉರುಳಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಐದು ಜನ ಮೃತಪಟ್ಟಿದ್ದಾರೆ.
ಮೃತರನ್ನು ಆಂಧ್ರಪ್ರದೇಶ ಮೇಡಕ ಜಿಲ್ಲೆಯ ವೆಂಕಟಾಪುರ ತಾಲ್ಲೂಕಿನ ಕಲೆರಮಂಡಿ ಗ್ರಾಮದ ರಾಮರಾವ (68), ಪ್ರಕಾಶರಾವ (38), ಲಲಿತಾ (28), ಜ್ಯೋತಿ (25). ಕಾರಿನ ಚಾಲಕ ಕಮ್ಮಾರ ಸದಾನಂದ (40) ಎಂದು ಗುರುತಿಸಲಾಗಿದೆ.
ರಾಜ್ಯ ಹೆದ್ದಾರಿಯಲ್ಲಿ ಗುಲ್ಬರ್ಗದಿಂದ -ಶಹಾಪುರ ಕಡೆ ಆಗಮಿಸುತ್ತಿದ್ದ ಕಾರು ಸುಮಾರು 20 ಅಡಿ ಆಳದ ಕಾಲುವೆಗೆ ಉರುಳಿತು. ಇದರಿಂದ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಉಸಿರುಗಟ್ಟಿ ಇವರೆಲ್ಲರೂ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಕಾರಿನ ಚಾಲಕ ನಿದ್ರೆಗೆ ಜಾರಿಯಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.
ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.