ಚಿತ್ರದುರ್ಗ: ಅಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ವಿವಿಧ ವೇಷಭೂಷಣ ಧರಿಸಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ದೇಸಿ ನೃತ್ಯಕ್ಕೆ ಹೆಜ್ಜೆ ಹಾಕಿದರು..
ನಗರದ ಎಸ್ಆರ್ಎಸ್ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ‘ಸಂಕ್ರಾಂತಿ ಸಂಭ್ರಮ -೨೦೧೩’ ಸಮಾರಂಭ ವಿದ್ಯಾರ್ಥಿಗಳಲ್ಲಿ ಉತ್ಸಾಹ, ಉಲ್ಲಾಸ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಪಿಯು ವಿಭಾಗ ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಗಳಿಗೆ ಅನುವು ಮಾಡಿಕೊಟ್ಟಿತು್ತ. ರಶ್ಮಿ ಮತ್ತು ಸಂಗಡಿಗರ ನಾಡಗೀತೆ ಗಾಯನ ಹಾಗೂ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಉಡುಪು ಧರಿಸಿದ ತಂಡಗಳ ಪ್ರದರ್ಶನ ಗಮನ ಸೆಳೆಯಿತು.
ಮೇಘನಾ ಮತ್ತು ತಂಡದವರು ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು. ರಕ್ಷಿತಾ ಮತ್ತು ತಂಡ ಚಲನಚಿತ್ರ ನೃತ್ಯ ಪ್ರದರ್ಶಿಸಿದರು. ಅಭಿಷೇಕ್ ಮತ್ತು ತಂಡದ ಮೂಕಾಭಿನಯ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ದೇಶೀಯ ಉಡುಪು ಪ್ರದರ್ಶನದಲ್ಲಿ ಬಿ.ಆರ್.ಸ್ನೇಹಾ ಪ್ರಥಮ ಬಹುಮಾನ ಪಡೆದುಕೊಂಡರು.
ರಂಗೋಲಿ ಸ್ಪರ್ಧೆ, ಸಂಗೀತಾ ಸ್ಪರ್ಧೆ ಸೇರಿದಂತೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರಿಗೆ ರಸದೌತಣ ನೀಡಿದವು.
ಇಡೀ ದಿನ ವಿದ್ಯಾರ್ಥಿಗಳು, ಸಿಬ್ಬಂದಿ, ಪೋಷಕರು ಸಂಕ್ರಾಂತಿ ಸಂಭ್ರಮವನ್ನು ಸವಿದರು. ಕಾಲೇಜು ಆವರಣ ಮದುವಣಗಿತ್ತಿಯಂತೆ ಸಿಂಗಾರಗೊಂಡು ಶೋಭಿಸುತ್ತಿತ್ತು.
ಅಂತರ ತರಗತಿ ಸ್ಪರ್ಧೆಗಳಲ್ಲಿ ದ್ವಿತೀಯ ಪಿಯು ‘ಬಿ’ ವಿಭಾಗವು ಎಸ್ಆರ್ಎಸ್ ಸಂಕ್ರಾಂತಿ - ೨೦೧೩ರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ದ್ವಿತೀಯ ಪಿಯು ‘ಎ’ ಮತ್ತು ‘ಡಿ’ ವಿಭಾಗಗಳು ರನ್ನರ್ ಅಪ್ ಸ್ಥಾನ ಪಡೆದುಕೊಂಡವು.
ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ನಮ್ಮ ಸಂಸ್ಥೆಯಲ್ಲಿ ಕೇವಲ ಪಠ್ಯವಿಷಯಗಳಿಗೆ ಮಾತ್ರ ಪ್ರಾಧಾನ್ಯತೆ ನೀಡದೆ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ನೆರವಾಗುವ ಸಹಪಠ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿದ್ದು, ವರ್ಷಕ್ಕೊಮ್ಮೆ ಹಬ್ಬದ ರೀತಿಯಲ್ಲಿ ಮಕ್ಕಳ ಪ್ರತಿಭೆಯನ್ನು ಜಾಗೃತಗೊಳಿಸುವ ಸಾಂಸ್ಕೃತಿಕ ಹೆಸರಿನಲ್ಲಿ ಎಸ್ಆರ್ಎಸ್ ಸಂಕ್ರಾಂತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಈ.ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.