ಮಡಿಕೇರಿ: ಜೀವನದಿ ಕಾವೇರಿ ಮಾತೆಗೆ ಕನ್ನಡಿಗರು ಹಾಗೂ ತಮಿಳರು ಅವಳಿ-ಜವಳಿ ಮಕ್ಕಳಿದ್ದಂತೆ. ಇವರಿಬ್ಬರನ್ನೂ ಒಂದುಗೂಡಿಸುವ ಮೂಲಕ ಎರಡೂ ರಾಜ್ಯಗಳ ನಡುವೆ ಮಧುರ ಬಾಂಧವ್ಯವನ್ನು ಕಾವೇರಿ ಮಾತೆ ಬೆಸೆಯುತ್ತಾಳೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ತಲಕಾವೇರಿಯಲ್ಲಿ ಭಾನುವಾರ ~ಮಾತೆ ಶ್ರೀ ಕಾವೇರಿ ಜಾಗೃತಿ ತೀರ್ಥಯಾತ್ರೆ~ಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಕಾವೇರಿಯ ಪಾವಿತ್ರ್ಯತೆಯನ್ನು ಸಾರುವುದು, ನದಿಯನ್ನು ಕಲುಷಿತಗೊಳಿಸದಂತೆ ನದಿಯ ತಟದಲ್ಲಿನ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೊರಟಿರುವ ಈ ಯಾತ್ರೆ ಮಹತ್ವದ್ದಾಗಿದೆ. ಕಾವೇರಿ ಉಗಮ ಸ್ಥಳವಾದ ತಲಕಾವೇರಿಯಿಂದ ತಮಿಳುನಾಡಿನ ಪೂಂಬುಕಾರ್ವರೆಗೆ ಸುಮಾರು 765 ಕಿ.ಮೀ ವರೆಗೆ ಸಂಚರಿಸಿ ಭಾವೈಕ್ಯ ಸಾರಲಿದೆ ಎಂದರು.
ಈ ಯಾತ್ರೆಯನ್ನು ರಾಮೇಶ್ವರಂನ ಅಖಿಲ ಭಾರತ ಸನ್ಯಾಸಿಗಳ ಸಂಘವು ಆಯೋಜಿಸಿದೆ. ಯಾತ್ರೆಯ ಉದ್ದೇಶವನ್ನು ರಾಜ್ಯದ ಸಂಯೋಜಕ ಸದಾಶಿವ ಅವರು ವಿವರಿಸಿದರು.
ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯದವರಲ್ಲದೇ, ತಮಿಳುನಾಡಿನ ಸುಮಾರು 40 ಜನ ಸಂತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿ.ಪಂ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಭಾಗಮಂಡಲ ಜಿ.ಪಂ.ಕ್ಷೇತ್ರದ ಸದಸ್ಯ ಎಸ್.ಎನ್.ರಾಜಾರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ದೇವಸ್ಥಾನ ಸಮಿತಿಯ ಎಸ್.ಎಸ್. ಸಂಪತ್ಕುಮಾರ್ ಇದ್ದರು. ಜಿಲ್ಲಾ ಸಂಯೋಜಕ ಚಿ.ನಾ.ಸೋಮೇಶ್ ಸ್ವಾಗತಿಸಿದರು.
ಭೇಟಿ ಮಾಡಿದರೆ ತಪ್ಪೇನು?: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜೈಲಿನಲ್ಲಿ ಮಠಾಧೀಶರು ಭೇಟಿಯಾಗಿರುವ ಬಗ್ಗೆ ಪೇಜಾವರ ಶ್ರೀಗಳನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಭೇಟಿ ಮಾಡಿರುವುದರಲ್ಲಿ ತಪ್ಪೇನೂ ಇಲ್ಲ ಎಂದರು.
ಆಸ್ಪತ್ರೆಯಲ್ಲಾಗಲಿ, ಜೈಲಿನಲ್ಲಾಗಲೀ ಕೈದಿಗಳನ್ನು ಭೇಟಿ ಮಾಡಿ ಮನಃಪರಿವರ್ತನೆ ಮಾಡಲು ಪ್ರಯತ್ನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದರು.