ಕೃಷ್ಣರಾಜಪುರ: `ಕ್ಷೇತ್ರದ ಜನರಿಗೆ ಕಾವೇರಿ ನೀರು ಪೂರೈಕೆಗೆ ಭರದ ಸಿದ್ಧತೆ ನಡೆಯುತ್ತಿದೆ. ಕಾವೇರಿ ನೀರು ಪೂರೈಕೆ ಯೋಜನೆಗೆ ಎ.ನಾರಾಯಣಪುರ ಗ್ರಾಮದಲ್ಲಿ ಸಾಂಕೇತಿಕವಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನವೆಂಬರ್ ಒಂದರಂದು ಚಾಲನೆ ನೀಡುವರು~ ಎಂದು ಶಾಸಕ ಎನ್.ಎಸ್.ನಂದೀಶ ರೆಡ್ಡಿ ತಿಳಿಸಿದರು.
ನಗರಕ್ಕೆ ಸೇರ್ಪಡೆಯಾದ ಬಡಾವಣೆಗಳಿಗೆ ಕಾವೇರಿ ನೀರು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಪಟ್ಟಣದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, `ರಾಮಮೂರ್ತಿನಗರದಲ್ಲಿ ಏಳು ದಶಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾಗಾರದ ಕಾಮಗಾರಿ ಪೂರ್ಣಗೊಂಡಿದೆ~ ಎಂದರು.
`ಕಾವೇರಿ ಜಲೋತ್ಸವ-2012 ಅಂಗವಾಗಿ ಇದೇ 24 ರಿಂದ 31ರವರೆಗೆ ಪ್ರತಿದಿನ ಸಂಜೆ ಕ್ಷೇತ್ರದ ಎಲ್ಲ ವಾರ್ಡುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು ಕಾವೇರಿ ಮಾತೆಯ ರಥಯಾತ್ರೆಯನ್ನು ಆಯೋಜಿಸಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.
`ಕ್ಷೇತ್ರದಲ್ಲಿ ಕುಡಿಯುವ ನೀರು ಸಂಪರ್ಕಕ್ಕೆ 70 ಸಾವಿರ ಅರ್ಜಿಗಳು ಬಂದಿದ್ದು ಅದರಲ್ಲಿ 50 ಸಾವಿರ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಒಂದು ದಿನಕ್ಕೆ ಒಂದು ಸಾವಿರ ಮನೆಗಳಿಗೆ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕೆ.ಆರ್. ಪುರ ಕ್ಷೇತ್ರಕ್ಕೆ 500 ಎಂಎಲ್ಡಿ ನೀರು ಲಭ್ಯ~ ಎಂದು ನಂದೀಶ್ ರೆಡ್ಡಿ ಮಾಹಿತಿ ನೀಡಿದರು.