ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಹೋರಾಟ: ಇಂದು ಕೆಆರ್‌ಎಸ್ ಮುತ್ತಿಗೆ ನಿರ್ಧಾರ

Last Updated 3 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಮಂಡ್ಯ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಧರಣಿ 19ನೇ ದಿನವೂ ಮುಂದುವರೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಂಗಳವಾರವೂ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಜೆಡಿಎಸ್ ಮಹಿಳಾ ಘಟಕ: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣ ಸಮೀಪ ವೃತ್ತದಿಂದ ಕಾವೇರಿ ವನ ಮುಂಭಾಗ ನಡೆಯುತ್ತಿರುವ ಧರಣಿ ಸ್ಥಳದವರೆಗೆ ಜಾಥಾ ನಡೆಸಿ ದರು. ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ಮಂಜುಳಾ ಉದಯಶಂಕರ್, ನಗರ ಘಟಕ ಅಧ್ಯಕ್ಷೆ ಜಯಶೀಲಾ, ನಾಗರತ್ನ, ನಗರಸಭಾ ಸದಸ್ಯರಾದ ಕೆ.ಸಿ.ನಾಗಮ್ಮ, ಬಿ.ಎಂ.ಪದ್ಮಾವತಿ,  ಬಿ.ಎನ್.ಸವಿತಾ ಸೇರಿದಂತೆ ಹಲವರು ಇದ್ದರು.

ಅನಿಕೇತನ ವೃದ್ಧಾಶ್ರಮ: ಚೀರನಹಳ್ಳಿ ರಸ್ತೆ ಮಾರ್ಗದಲ್ಲಿರುವ ಅನಿಕೇತನ ವೃದ್ಧಾಶ್ರಮದ ತಾಯಮ್ಮ, ಸವಿತಾ, ಸರ್ವಮಂಗಳಾ, ನಾಗರತ್ನ, ಪದ್ಮಾ, ಚೆನ್ನಮ್ಮ, ಹೇಮಾವತಿ ಶೆಟ್ಟಿ ಸೇರಿದಂತೆ ಹಲವರು ಧರಣಿಯಲ್ಲಿದ್ದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕ ಎಂ.ಕೃಷ್ಣಮೂರ್ತಿ, ಎಸ್. ಸಿದ್ದಯ್ಯ; ಸರ್ವ ಬಣಜಿಗ(ಬಲಿಜರ) ಸಂಘ; ಹೊಯ್ಸಳ ಸೇವಾ ಟ್ರಸ್ಟ್, ಮಂಡ್ಯ ಗಾಂಧಿ ನಗರದ 7ನೇ ಕ್ರಾಸ್‌ನ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿ,ಗೂಡ್ಸ್ ಆಟೊ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಅಂಬರೀಷ್ ಅಭಿಮಾನಿಗಳ ಸಂಘ: ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯ ಘಟಕ ಅಧ್ಯಕ್ಷ ಬೇಲೂರು ಸೋಮಶೇಖರ್, ಸಿದ್ದರೂಢ ಸತೀಶ್‌ಗೌಡ, ಸುನೀತಾ ರಾಜೇಶ್, ನಗರಸಭೆ ಸದಸ್ಯ ಹೊಸಹಳ್ಳಿ ಬೋರೇಗೌಡ, ಮಹದೇವು ಬಿಳಿದೇಗಲು ಇದ್ದರು.

ಟೆಂಪೊ ಮಾಲೀಕರ, ಚಾಲಕರ ಸಂಘ: ಮಿನಿ ಸರಕು ಸಾಗಾಣಿಕೆ ಟೆಂಪೊ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ ಸಂಘದ ಅಧ್ಯಕ್ಷ ನಾಗರಾಜು, ಕಾಳೇನಹಳ್ಳಿ ಕೆಂಚೇಗೌಡ ಅವರ ನೇತೃತ್ವದಲ್ಲಿ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಸತೀಶ್, ಜಗದೀಶ್, ಮಂಜು, ರವಿ, ಪುರುಷೋತ್ತಮ, ನಂಜುಂಡ ಮತ್ತಿತರರು ಪಾಲ್ಗೊಂಡಿದ್ದರು.

ಸ್ಪೋರ್ಟ್ಸ್ ಕ್ಲಬ್: ಕ್ಲಬ್‌ನಿಂದ ಸದಸ್ಯರು, ಬೈಕುಗಳಲ್ಲಿ ಹೆದ್ದಾರಿಯಲ್ಲಿ ಜಾಥಾ ನಡೆಸಿದರು. ಸರ್ಕಾರಿ ಬಸ್ ನಿಲ್ದಾಣ ವೃತ್ತ, ಆರ್‌ಪಿ ರಸ್ತೆ, ಕೆಆರ್ ರಸ್ತೆ ಮಾರ್ಗ ವಾಗಿ ಬಂದು ಜಿಲ್ಲಾಧಿಕಾರಿ ಕಚೇರಿ ಸಿಂಬ್ಬದಿಗೆ ಮನವಿಪತ್ರ ಸಲ್ಲಿಸಿದರು. ಕ್ಲಬ್‌ನ ಶಿವರಾಮು, ಚಂದ್ರಶೇಖರ್, ಡಾ. ರಾಮಲಿಂಗಯ್ಯ, ಎಚ್.ಎಂ.ಹೊನ್ನೇಶ್, ಬಸವರಾಜು, ರವೀಂದ್ರ, ಕಾಳೇಗೌಡ, ಕೆ.ಟಿ.ಹನುಮಂತು ಇದ್ದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಗೆ ಕ್ಲಬ್ ವತಿಯಿಂದ 10,001 ರೂ. ದೇಣಿಗೆ ನೀಡಲಾಯಿತು.

ನಿರ್ಮಲಾ ಚಿಕ್ಕೇಗೌಡ ನೇತೃತ್ವದಲ್ಲಿ ಬಿ.ಟಿ.ಲಲಿತಾ ನಾಯಕ್ ಬಡಾವಣೆ ನಿವಾಸಿಗಳು, ಚಿಕ್ಕೇಗೌಡನದೊಡ್ಡಿ ಗ್ರಾಮಸ್ಥರು ಮೈಷುಗರ್ ವೃತ್ತದಲ್ಲಿ ಅಡುಗೆ ತಯಾರಿಸಿ ಪ್ರತಿಭಟಿಸಿದರು. ಕೃಷ್ಣನಾಯಕ್, ಶಶಿಕುಮಾರ್, ಸುಂದರ್ ಇದ್ದರು.

ಗ್ರಾಮಸ್ಥರ ಪ್ರತಿಭಟನೆ: ಪಣಕನಹಳ್ಳಿ, ತಂಡಸನಹಳ್ಳಿ, ಕೋಣನಹಳ್ಳಿ ಗ್ರಾಮಸ್ಥರು, ಮೈಸೂರು-ಬೆಂಗಳೂರು ಹೆದ್ದಾರಿಯಿಂದ ವಿಸಿ ಫಾರ್ಮ್‌ಗೆ ತಿರುವು ಪಡೆವ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು. ವಕೀಲ ಪಿಎನ್ ಸುರೇಶ್, ಕ್ಯಾತೇಗೌಡ, ಸಿದ್ದೇಗೌಡ, ರಾಜು, ಲಿಂಗೇಗೌಡ ಮೊದಲಾದವರು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಮುಂಜಾನೆಯೇ, ವಾಯು ವಿವಾಹರಿಗಳ ಒಕ್ಕೂಟದ ಸದಸ್ಯರು ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಹೊರಟು, ಸರ್ಕಾರಿ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸಿದರು. ಡಾ. ಚಂದ್ರು, ಭರತ್, ಬೋರೇಗೌಡ, ಡಾ. ಚಂದ್ರಶೇಖರ್, ರವಿ. ರಮೇಶ್, ಪ್ರೇಮಾ ಹಾಜರಿದ್ದರು.

ಪ್ರಕಾಶ್ ಆರ್ಟ್ಸ್ ಕಲಾವಿದರು, `ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ, ಇದು ಕಾವೇರಿ ನೀರಿಗಾಗಿ ಹೋರಾಟ~ ಎನ್ನುವ ಘೊಷಣೆಯೊಂದಿಗೆ ಪ್ರತಿಭಟನೆ ನಡೆಸಿ ಗಮನ ಸೆಳೆದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಭಾಸ್ಕರ್, ಶೇಖರ್, ಚನ್ನಬಸವಾಚಾರಿ, ದೇವರಾಜ್ ಪಟೇಲ್, ಕುಮಾರ್, ವಿಜಿ, ಕಾರ್ತಿಕ್, ಎಚ್.ಡಿ.ಜಯರಾಂ, ಜೋಸೆಫ್ ಇದ್ದರು.

ಎತ್ತಿನಗಾಡಿ ಮೆರವಣಿಗೆ: ಸಂಚಾರ ಅಸ್ತವ್ಯಸ್ತ
ಶ್ರೀರಂಗಪಟ್ಟಣ: ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ತಾಲ್ಲೂಕಿನ ದರಸಗುಪ್ಪೆ ಹಾಗೂ ಕಪರನಕೊಪ್ಪಲು ಗ್ರಾಮಸ್ಥರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ದರಸಗುಪ್ಪೆಯಿಂದ ಶ್ರೀರಂಗಪಟ್ಟಣದ ವರೆಗೆ 5 ಕಿ.ಮೀ. ದೂರ ಹತ್ತಾರು ಎತ್ತಿನ ಗಾಡಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
 
ಕೆಲವು ರೈತರು ಪಾದಯಾತ್ರೆ ಕೂಡ ನಡೆಸಿದರು.  ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಎತ್ತಿನ ಗಾಡಿಗಳನ್ನು ನಿಲ್ಲಿಸಿ ವಾಹನಗಳನ್ನು ತಡೆದರು. ಸುಮಾರು ಒಂದೂವರೆ ತಾಸು ಹೆದ್ದಾರಿ ಬಂದ್ ಮಾಡಿದರು. ಎತ್ತುಗಳನ್ನು ರಸ್ತೆಯಲ್ಲಿ ಕಟ್ಟಿ ಹುಲ್ಲು ಮೇಯಿಸಿದರು. ರೈತರು ಹೆದ್ದಾರಿಯಲ್ಲಿ ಕುಳಿತು ಊಟ ಮಾಡಿದರು.

ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಪಿ.ಧನಂಜಯ, ಟಿ.ರಂಗೇಗೌಡ, ಕುಮಾರ್, ಶಂಕರ್, ವಿಜಯಕುಮಾರ್, ಕೆ.ಜಯರಾಂ, ಕೃಷ್ಣೇಗೌಡ ನೇತೃತ್ವ ವಹಿಸಿದ್ದರು.

ಅಂಗವಿಕಲರ ಸಂಘ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ತಾಲ್ಲೂಕು ಅಂಗವಿಕಲರ ಸಂಘದ ಸದಸ್ಯರು ಮಂಗಳವಾರ ಪಟ್ಟಣದ ಕುವೆಂಪು ಪ್ರತಿಮೆ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಊರುಗೋಲುಗಳನ್ನು ರಸ್ತೆಯಲ್ಲಿ ಇಟ್ಟು ತೆವಳಿದರು. ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪಾಲಹಳ್ಳಿ ಬಸವರಾಜು, ನಾಗರಾಜು, ರವಿಕುಮಾರ್, ಶಿವಕುಮಾರ್, ಶಾರದಾ ಇದ್ದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ: ತಮಿಳುನಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ತಾಲ್ಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಮಂಗಳವಾರ ರಸ್ತೆ ತಡೆ ನಡೆಸಿದರು. ಸಮಿತಿಯ ಅಧ್ಯಕ್ಷ ಡಿ.ಎಂ.ರವಿ, ಗಂಜಾಂ ಪುಟ್ಟರಾಮು, ದರಸಗುಪ್ಪೆ ವಿಜಯಕುಮಾರ್, ಕೆ.ಶೆಟ್ಟಹಳ್ಳಿ ಸುರೇಶ್, ಮನೋಹರ್, ವನರಾಜು ಇತರರು ಧರಣಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ತಾಲ್ಲೂಕು ಅಧ್ಯಕ್ಷ ಬಸವರಾಜು, ಚಂದಗಾಲು ಶಂಕರ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಗಂಜಾಂ ರವಿಚಂದ್ರ, ಹೊನ್ನಯ್ಯ, ಕುಮಾರ್, ನಂಜುಂಡ, ಕುಮಾರ್‌ಇದ್ದರು.

ಜೈಲ್ ಭರೋ: ಕೆಆರ್‌ಎಸ್‌ಗೆ 10 ಸಾವಿರ ಮಂದಿ
ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ಜನತೆ ಕೆಆರ್‌ಎಸ್ ಜಲಾಶಯಕ್ಕೆ ಅ.3ರಂದುಮುತ್ತಿಗೆ ಹಾಕಲಿದ್ದಾರೆಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ತಿಳಿಸಿದರು.

  ಪಟ್ಟಣದ ಕುವೆಂಪು ಪ್ರತಿಮೆ ಬಳಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ಹಳ್ಳಿಯಿಂದಲೂ ಜನರು ಪಟ್ಟಣಕ್ಕೆ ಆಗಮಿಸಲಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಿಂದ ಬೆಳಿಗ್ಗೆ 10.30ಕ್ಕೆ ವಾಹನಗಳ ಮೂಲಕ ಕೆಆರ್‌ಎಸ್‌ಗೆ ತೆರಳಲಿದ್ದಾರೆ. ಪಾಲಹಳ್ಳಿ, ಪಂಪ್‌ಹೌಸ್, ಬೆಳಗೊಳ, ಹುಲಿಕೆರೆ ಮಾರ್ಗ ವಾಗಿ ಕೆಆರ್‌ಎಸ್ ತಲುಪಿ ಮುಖ್ಯದ್ವಾರದ ಬಳಿ ಜಮಾಯಿಸಲಿದ್ದಾರೆ ಎಂದರು.

 ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಬರುವಂತೆ ಪಟ್ಟಣ, ಎಲ್ಲ ಗ್ರಾಮಗಳಲ್ಲಿ ಡಂಗುರ ಹೊಡೆಸಲಾಗುವುದು  ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಬಿಜೆಪಿ ಮಾಜಿ ಜಿಲ್ಲಾಧ್ಯಕ ಕೆ.ಬಲರಾಂ, ಕೆಪಿಸಿಸಿ ಸದಸ್ಯ ಎಂ.ಭಾಸ್ಕರ್, ಕಾವೇರಿ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಸ್ವಾಮಿಗೌಡ ಇತರರು ಇದ್ದರು.

ನಗುವನಹಳ್ಳಿ: ಜಯಲಲಿತಾ ಪ್ರತಿಕೃತಿ ದಹನ
ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಗ್ರಾಮಸ್ಥರು ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿದರು.
ನಗುವನಹಳ್ಳಿಯಿಂದ ಅಡ್ಡರಸ್ತೆ ವರೆಗೆ ಎರಡು ಕಿ.ಮೀ. ದೂರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಮಿಳುನಾಡು ಮುಖ್ಯ ಮಂತ್ರಿಯ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ಒಂದು ತಾಸು ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರಸ್ತೆ ಯಲ್ಲೇ ಕುಳಿತು ಊಟ ಮಾಡಿದರು. ನಗುವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ವಿ.ಚಲುವರಾಜು, ಸೇವಾ ದಳದ ತಾಲ್ಲೂಕು ಅಧ್ಯಕ್ಷ ಎನ್.ಶಿವಸ್ವಾಮಿ, ರಾಮಸ್ವಾಮಿಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ, ಭಾಗ್ಯಮ್ಮ, ಮಾಜಿ ಸದಸ್ಯ ನಾಗರಾಜು, ದಿನೇಶ್, ಯೋಗೇಶ್ ಇದ್ದರು.

  ಪತ್ರಕರ್ತರು: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಸಂಘದ ಕಚೇರಿಯಿಂದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದ ವರೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪತ್ರಕರ್ತರು ಪ್ರತಿಭಟನೆ ನಡೆಸಿದರು. ಹೆದ್ದಾರಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಜಿ.ಎನ್.ರವೀಶ್‌ಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್, ಕಾರೇಕುರ ವಿನಯ್, ಬಿ.ಸಿ.ಸಂತೋಷ್‌ಕುಮಾರ್, ಗಂಜಾಂ ಮಂಜು, ರಾಮೇಗೌಡ, ರಾಘವೇಂದ್ರ, ಕೆ.ಎನ್.ನಾಗೇಗೌಡ ಇತರರು ಇದ್ದರು.

ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ
ಮದ್ದೂರು: ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ಸರ್ವಪಕ್ಷಗಳ ಮುಖಂಡರು ಕಪ್ಪುಪಟ್ಟಿ ಧರಿಸಿ ತಾಲ್ಲೂಕು ಕಾವೇರಿ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕಿ ಕಲ್ಪನಾ ಸಿದ್ದರಾಜು ಮೌನ ಪ್ರತಿಭಟನೆಗೆ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಬಿಜೆಪಿ ಅಧ್ಯಕ್ಷ ಎನ್.ಆರ್.ಪ್ರಕಾಶ್, ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಾರ್ಯಾಧ್ಯಕ್ಷ ವೆಂಕಟೇಶ್, ಯುವ ಅಧ್ಯಕ್ಷ ಅಣ್ಣೂರು ನವೀನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾಪ್ರಕಾಶ್, ಸದಸ್ಯ ಕೆ.ರವಿ, ಪುರಸಭಾಧ್ಯಕ್ಷ ಅಂಕಪ್ಪ ಎ.ಚಂದು, ಮಾಜಿ ಅಧ್ಯಕ್ಷರಾದ ಅಮರ್‌ಬಾಬು, ಎಂ.ಐ.ಪ್ರವೀಣ್, ವೈ.ಬಿ.ಶಂಕರೇಗೌಡ, ಬಿ.ಎಸ್.ಆರ್ ಕಾಂಗ್ರೆಸ್ ಮುಖಂಡ ಅಪ್ಪು ಪಿ.ಗೌಡ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪಂಗಿರಾಮಯ್ಯ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಮನ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಎನ್.ಎನ್.ನವೀನ್‌ಕುಮಾರ್, ವಿಶ್ವ ಒಕ್ಕಲಿಗರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಮುಖಂಡರಾದ ತೊಪ್ಪನಹಳ್ಳಿ ಪ್ರಕಾಶ್, ಕೃಷ್ಣ, ಶಿವಲಿಂಗೇಗೌಡ, ಕೆಂಗಲ್‌ಗೌಡ ಇದ್ದರು.

ಗಾಯನ ಪ್ರತಿಭಟನೆ: ಇಲ್ಲಿನ ತಾಲ್ಲೂಕು ಕಚೇರಿ ಎದುರು ನಿರಂತರ ಧರಣಿಯಲ್ಲಿ  ಜನಜಾಗೃತಿ ಗಾಯಕರಾದ ಅಂಬರಹಳ್ಳಿಸ್ವಾಮಿ, ಹುರುಗಲವಾಡಿ ರಾಮಯ್ಯ ಕಾವೇರಿ ಚಳವಳಿ ಕುರಿತ ಹೋರಾಟ ಗೀತೆಗಳನ್ನು ಹಾಡಿ ಪ್ರತಿಭಟನೆ ನಡೆಸಿದರು.

ಕ್ರಿಕೆಟ್ ಆಟ: ಪಟ್ಟಣದ ಟಿ.ಬಿ ವೃತ್ತದಲ್ಲಿ ಕ್ರೀಡಾಪಟು ದಿವಂಗತ ಎಂ.ಆರ್.ಅಭಿಲಾಷ್ ಅಭಿಮಾನಿಗಳ ಬಳಗದ ಸದಸ್ಯರು ಕ್ರಿಕೆಟ್ ಆಟವಾಡುವ ಮೂಲಕ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಬಳಗದ ಅಧ್ಯಕ್ಷ ಚೇತನಕೃಷ್ಣ, ಕಾರ್ಯದರ್ಶಿ ಅವಿನಂದನ್, ಸದಸ್ಯರಾದ ಶಿವಶಂಕರ್, ಶಿವಪ್ರಸಾದ್, ಯೋಗೇಶ್‌ಗೌಡ, ಪ್ರೀತಂ, ಸೋಮಸುಂದರ್, ಮಹೇಶ್, ಸಚಿನ್, ಸಂತೋಷ್ ಸೇರಿದಂತೆ ಹಲವರು ಇದ್ದರು.

ಚಡ್ಡಿ ಮೆರವಣಿಗೆ: ಮಳವಳ್ಳಿ ಕಾವೇರಿ ಹಿತ ರಕ್ಷಣಾ ಸಮಿತಿಯವರು ಪಟ್ಟಣಕ್ಕೆ ಇಂದು ಚಡ್ಡಿ ಮೆರವಣಿಗೆಯಲ್ಲಿ ಬಂದಾಗ ಅವರನ್ನು ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಮುಖಂಡರಾದ ಪ್ರಕಾಶ್, ಶಿವಲಿಂಗೇಗೌಡ ಇತರರು ಅಭಿನಂದಿಸಿ ಸ್ವಾಗತಿಸಿದರು.

ಶಿವಪುರ ಧ್ವಜಸತ್ಯಾಗ್ರಹಸೌಧದ ಎದುರು ಕೆಲ ಕಾಲ ಧರಣಿ ಕುಳಿತ ಅವರು ತಮಿಳುನಾಡು ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಧರಣಿಯಲ್ಲಿ ಸಮಿತಿಯ ಸದಸ್ಯರಾದ ಸೋಮಣ್ಣ, ಸತೀಶ್, ಜವರೇಗೌಡ, ದೊಡ್ಡಯ್ಯ, ಬಸವರಾಜು, ಶಂಕರೇಗೌಡ, ಮಹೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ಬೈಕ್ ರ‌್ಯಾಲಿ: ಮೊಬೈಲ್ ವರ್ತಕರ ಸಂಘದಿಂದ ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು. ಮೊಬೈಲ್ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಮುಚ್ಚಿ ಬೈಕ್ ರ‌್ಯಾಲಿ ಆರಂಭಿಸಿದರು. ನಂತರ ಶಿವಪುರ ಧ್ವಜಸತ್ಯಾಗ್ರಹಸೌಧಕ್ಕೆ ತೆರಳಿ ಅಲ್ಲಿ ಕೆಲ ಕಾಲ ಧರಣಿ ನಡೆಸಿ ನಂತರ ಅಲ್ಲಿಂದ ತಾಲ್ಲೂಕು ಕಚೇರಿಗೆ ತೆರಳಿ ತಮ್ಮ ಖಂಡನಾ ನಿರ್ಣಯದ ಪ್ರತಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಸಂಘದ ಸುಶಾಂತ್, ನಿಂಗೇಗೌಡ, ಕಿರಣ್, ಗಜೇಂದ್ರ, ಸಾದಿಕ್, ದೀಪಕ್, ಇಲಾಯಿ, ಚಂದ್ರು, ಮಲ್ಲೇಶ್, ಸಚಿನ್ ಪಾಲ್ಗೊಂಡಿದ್ದರು.

ಮೊಬೈಲ್ ಅಂಗಡಿ ಮಾಲೀಕರ ಪ್ರತಿಭಟನೆಯಿಂದಾಗಿ  ಪಟ್ಟಣದಲ್ಲಿ ಕರೆನ್ಸಿ ರೀಚಾರ್ಜ್ ಮಾಡದ ಕಾರಣ ನಾಗರಿಕರು ಪರದಾಡಿದರು.

ಅಣಕು ಪ್ರದರ್ಶನ: ವಿಶ್ವ ಒಕ್ಕಲಿಗರ ಜನ ಜಾಗೃತಿ ಸಂಘದ ವತಿಯಿಂದ ಪಟ್ಟಣದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರ ಅಣಕು ಪ್ರದರ್ಶನ ನಡೆಸಲಾಯಿತು. ಕೇಂದ್ರ ಸಚಿವರ ಹಾಗೂ ಸಂಸದರ ಫ್ಲೆಕ್ಸ್ ಬ್ಯಾನರ್ ಅನ್ನು ಮೆರವಣಿಗೆ ನಡೆಸಿದ ಅವರು ಟಿ.ಬಿ ವೃತ್ತದಲ್ಲಿ ದಹಿಸಿದರು. ಸಂಘದ ರಾಜ್ಯಾಧ್ಯಕ್ಷ ಎಂ.ಸಿ.ಲಿಂಗರಾಜು, ಕಾರ್ಯದರ್ಶಿ ಸೋಮಶೇಖರ್, ಚಂದ್ರಹಾಸ್, ವಿನಯ್, ಚಂದು, ಮನು, ರಾಜಣ್ಣ, ಪಾಪಣ್ಣ ಇದ್ದರು.

ಎಳನೀರು ವರ್ತಕರಿಂದ ಪ್ರತಿಭಟನೆ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಬಳಿ ಎಳನೀರು ವರ್ತಕರು ಹಾಗೂ ಹಮಾಲಿಗಳ ಸಂಘದ ಸದಸ್ಯರು ಜಯಲಲಿತಾ, ಮನಮೋಹನ್ ಸಿಂಗ್ ಅವರ ಫ್ಲೆಕ್ಸ್ ದಹಿಸಿ ಪ್ರತಿಭಟನೆ ಮಾಡಿದರು. 

ತಮಿಳರಿಂದ ಪ್ರತಿಭಟನೆ: ಇಲ್ಲಿಗೆ ಸಮೀಪದ ಗೆಜ್ಜಲಗೆರೆ ಕಾಲೊನಿ ಬಳಿ ತಮಿಳು ಕಾಲೊನಿ ನಿವಾಸಿಗಳು ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿಗಳು ಹಾಗೂ ಕಲ್ಲನ್ನು ಇಟ್ಟು ಬೆಳಿಗ್ಗೆಯಿಂದ ಸಂಜೆಯವರೆಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಹೆದ್ದಾರಿಯಲ್ಲಿ ಗಾಂಧಿ ಜಯಂತಿ: ಸಮೀಪದ ಗೆಜ್ಜಲಗೆರೆ ಬಳಿ ಹೆದ್ದಾರಿಯಲ್ಲಿ ಮಹಿಳೆ ಯರು ಮಂಗಳವಾರ ಸರಳ ಗಾಂಧೀಜಿ-ಶಾಸ್ತ್ರೀಜಿ ಜಯಂತಿಯನ್ನು ಆಚರಿಸಿದರು.

`ರಸ್ತೆಯಲ್ಲಿಯೇ ಅಡುಗೆ ಮಾಡುವ ಮೂಲಕ ಸರಳವಾಗಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ನಾಳೆಯಿಂದ ಪ್ರತಿಭಟನೆ ಇನ್ನಷ್ಟು ಉಗ್ರವಾಗಲಿದೆ~ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತನಾಯಕಿ ಸುನಂದ ಜಯರಾಂ ತಿಳಿಸಿದರು. ರೈತ ಮುಖಂಡರಾದ ಹರೀಶ್, ಸುನೀಲ್, ಕುದುರಗುಂಡಿ ಜಯರಾಂ, ಸತೀಶ್, ಪ್ರಸನ್ನ, ಆದಿ ಪ್ರಸನ್ನ, ಮೋಹನ್, ರವಿ, ಸಾಕಮ್ಮ, ಲಕ್ಷ್ಮಮ್ಮ, ಭಾಗ್ಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗೊರವನಹಳ್ಳಿ: ಇಲ್ಲಿನ ಗೇಟ್ ಬಳಿ ಗ್ರಾಮಸ್ಥರು ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹೀಗಾಗಿ ಮಳವಳ್ಳಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಗ್ರಾಮದ ಮುಖಂಡರಾದ ಶಿವಣ್ಣ, ಲಿಂಗಯ್ಯ, ನಿರಂಜನ್, ನವೀನ್, ಪ್ರತಾಪ್, ರಾಜು, ಲಕ್ಷ್ಮಣ್, ಮನು ಪಾಲ್ಗೊಂಡಿದ್ದರು.

ಶಿವಪುರ: ಇಲ್ಲಿನ ಸತ್ಯಾಗ್ರಹಸೌಧದ ಬಳಿ ಗ್ರಾಮಸ್ಥರು ಜಯಲಲಿತಾ ಅಣಕು ಶವ ಯಾತ್ರೆ ನಡೆಸಿದರು. ಅಲ್ಲದೇ ಅಣಕು ಶ್ರಾದ್ಧ ಏರ್ಪಡಿಸಿ ಅಡುಗೆ ಮಾಡಿ ಭಾಗವಹಿ ಸಿದ್ದ ಪ್ರತಿಭಟನಾ ನಿರತರಿಗೆ ಉಣಬಡಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಂದರ್ಶ, ಪುರಸಭಾ ಮಾಜಿ ಸದಸ್ಯ ವಿಜಯಕುಮಾರ್, ಶಿವಕುಮಾರ್, ಪ್ರಕಾಶ, ಸಿದ್ದು, ರಘು, ಎಸ್.ಸಿ.ರಘು, ಯೋಗೇಶ, ನಾಗೇಶ್, ಕೇಬಲ್‌ರಾಮು, ಸಂದೀಪ್, ಮಹೇಶ್ ಪಾಲ್ಗೊಂಡಿದ್ದರು.

ಚನ್ನೇಗೌಡನದೊಡ್ಡಿ: ಚನ್ನೇಗೌಡನದೊಡ್ಡಿಯಲ್ಲಿ ಗ್ರಾಮಸ್ಥರು ಹೆದ್ದಾರಿಯಲ್ಲಿ ಅಡುಗೆ ತಯಾರಿಸಿ ಸರತಿಯಲ್ಲಿ ಕುಳಿತು ಊಟ ಮಾಡಿ ಪ್ರತಿಭಟನೆ ನಡೆಸಿದರು.

ಕೃಷ್ಣ ನಿವಾಸಕ್ಕೆ ಮುತ್ತಿಗೆ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಳೆದಿರುವ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಸೋಮನಹಳ್ಳಿ ನಿವಾಸಕ್ಕೆ ಕಳೆದ ಸೋಮವಾರ ರಾತ್ರಿ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಎಸ್.ಎಂ.ಕೃಷ್ಣ ವಿರುದ್ಧ ಘೋಷಣೆ ಕೂಗಿದರು. ವೇದಿಕೆಯ ಜಿಲ್ಲಾಧ್ಯಕ್ಷೆ ಗೀತಾ, ಮಂಗಳಮ್ಮ, ನಿಕಿಲ್‌ಗೌಡ, ರವೀಂದ್ರ, ರಂಜಿತ್‌ಗೌಡ, ಸತೀಶ್, ಯೋಗೇಶ್, ರಾಜು, ಶಂಕರ್, ಮಲ್ಲೇಶ್, ಕೃಷ್ಣೇಗೌಡ ಪ್ರತಿಭಟನೆಯಲ್ಲಿದ್ದರು.

ತಮಿಳುನಾಡಿಗೆ ನೀರು: ಸೈಕಲ್ ಜಾಥಾ, ಪ್ರತಿಭಟನೆ
ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಸೋಮ ವಾರ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಪಟ್ಟಣದಿಂದ ಸೈಕಲ್ ಜಾಥಾ ಮೂಲಕ ತಾಲ್ಲೂಕಿನ ಶಿವನಸಮುದ್ರಂ(ಬ್ಲಫ್)ನ ಬಳಿಯಿರುವ ಗಗನಚುಕ್ಕಿ ಜಲಪಾತದ ಬಳಿ ಹೋಗಿ ಪ್ರತಿಭಟನೆ ನಡೆಸಿದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ ನೀರು ಬಿಡಲು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅವೈಜ್ಞಾನಿಕವಾಗಿದ್ದು ಬರದ ಬೇಗೆಯಲ್ಲಿ ಬೇಯುತ್ತಿರುವ ರಾಜ್ಯದ ಜನರಿಗೆ ತೊಂದರೆಯಾಗಲಿದೆ. ಇದರ ಬಗ್ಗೆ ರಾಜ್ಯಪಾಲರು ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮಾಹಿತಿ ನೀಡಬಹುದಾಗಿದ್ದು ಅವರು ನೀಡಿಲ್ಲ ಎಂದು ಆರೋಪಿಸಿದರು.

ಪ್ರಧಾನಿಯವರು ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯದ ಪರಿಸ್ಥಿತಿ ಅವಲೋಕಿಸಿ ತೀರ್ಪು ನೀಡಬಹುದಾಗಿದೆ. ಕೇಂದ್ರವು ರಾಜ್ಯಕ್ಕೆ ಮಲತಾಯಿಧೋರಣೆ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು. ಕವಿ ನಾಗರಾಜು, ಮಾದೇಶ, ನಾಗರಾಜು, ಶೇಖರ, ನಂಜುಂಡ, ಗ್ರಾಮ ಪಂಚಾಯಿತಿ ಸದಸ್ಯ ಹೊಯ್ಸಳ ಪ್ರತಿಭಟನೆಯಲ್ಲಿದ್ದರು.

ಕೇಂದ್ರದ ಕ್ರಮಕ್ಕೆ ಖಂಡನೆ
ಭಾರತೀನಗರ: ತಮಿಳುನಾಡಿಗೆ  ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ಖಂಡಿಸಿ ಭಾರತೀನಗರದಲ್ಲಿ ಮಂಗಳವಾರ ಗೌಡಯ್ಯನದೊಡ್ಡಿ ಗ್ರಾಮಸ್ಥರು ಕೆಲಕಾಲ ರಸ್ತೆ ತಡೆ ನಡೆಸಿದರು. ನಗರದ ಮಂಡ್ಯ ವೃತ್ತದಲ್ಲಿ ರೈತರು ಜಮಾಯಿಸಿ ದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು. ಪೊಲೀಸರು ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಿ ರಸ್ತೆ ತಡೆ ತೆರವುಗೊಳಿಸಿದರು. ಮುಖಂಡರಾದ ಬಲ್ಲೇಗೌಡ, ಶಿವಲಿಂಗೇಗೌಡ, ಕಾಳೇಗೌಡ, ರವಿ. ಶಿವು, ಪ್ರಸನ್ನ, ಭಾಗವಹಿಸಿದ್ದರು.

ಹುಲಿಗೆರೆಪುರಗೇಟ್: ಇಲ್ಲಿಗೆ ಸಮೀಪದ ಹುಲಿಗೆರೆಪುರ ಗ್ರಾಮದ ರೈತರು ಮದ್ದೂರು ಮಳವಳ್ಳಿ ರಸ್ತೆಯಲ್ಲಿ ಧರಣಿ ನಡೆಸಿ ಪ್ರತಿಭಟಿಸಿದರು. ರಸ್ತೆ ಮಧ್ಯೆ ಲಾರಿ ಯೊಂದನ್ನು ನಿಲ್ಲಿಸಿ, ಯಾವುದೇ ವಾಹನಗಳು ಚಲಿಸದಂತೆ ತಡೆದರು. ರಸ್ತೆ ಪಕ್ಕದಲ್ಲಿ ಪೆಂಡಾಲ್ ಹಾಕಿ, ಅಲ್ಲೇ ಅಡುಗೆ ತಯಾರಿಸಿ ರಸ್ತೆ ಮಧ್ಯೆ ಕುಳಿತು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಬೆಳಿಗ್ಗೆಯಿಂದಲೇ ಆರಂಭವಾದ ರಸ್ತೆ ತಡೆಯಿಂದ ದೂರದ ಊರುಗಳಿಗೆ ತೆರಳಲು ಪ್ರಯಾಣಿಕರು ಪರದಾಡುವಂತಾಯಿತು.

ಬೋರಾಪುರ ಗೇಟ್: ಇಲ್ಲಿಗೆ ಸಮೀಪದ ಬೋರಾಪುರ ಗೇಟ್ ಬಳಿ ರೈತ ಸಂಘದ ಮುಖಂಡ ಶಂಕರೇಗೌಡ ನೇತೃತ್ವದಲ್ಲಿ ನೂರಾರು ರೈತರು ಮದ್ದೂರು ಮಳವಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಧಿಕ್ಕಾರ ಕೂಗಿದರು.

ಕೆಆರ್‌ಎಸ್‌ಗೆ ಮುತ್ತಿಗೆ: ಯಶಸ್ವಿಗೊಳಿಸಲು ಮನವಿ
ಭಾರತೀನಗರ:  ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರ್ಧಾರದಂತೆ ಬುಧವಾರ ಕೆಆರ್‌ಎಸ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಮುಖಂಡ ಮಧು ಜಿ.ಮಾದೇಗೌಡ ಮನವಿ ಮಾಡಿದ್ದಾರೆ.

ಬುಧವಾರ ಭಾರತೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರಕ್ಕೆ ಮಣಿದ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನೀರು ಬಿಡುವಂತೆ ಆದೇಶ ನೀಡಿರುವುದು ದುರ್ದೈವ. ಇದನ್ನು ಖಂಡಿಸಿ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಎಚ್ಚರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಕ್ಷಾತೀತವಾಗಿ ನಡೆಯುತ್ತಿರುವ ಈ ಮುತ್ತಿಗೆ ಕಾರ್ಯ ಕ್ರಮಕ್ಕೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಜನತೆ ಭಾಗವಹಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT