ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ- ಭಾರತ ಮಧ್ಯೆ ದಶಕಗಳಿಂದ ಬಗೆಹರಿಯದೆ ಕಗ್ಗಂಟಾಗಿರುವ ಕಾಶ್ಮೀರ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಅನ್ಯ ರಾಷ್ಟ್ರದ ನೆರವಿಲ್ಲದೆ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಮರ್ಥವಾಗಿವೆ ಎಂದೂ ಹೇಳಿದೆ.
ರಷ್ಯದ ವಿದೇಶಾಂಗ ಸಚಿವ ಸೆರ್ಗೆ ಲವರ್ವೊ ಅವರು ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಅವರೊಂದಿಗೆ ಗುರುವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
`ಕಾಶ್ಮೀರದ ಬಗ್ಗೆಯೂ ನಾವು ಚರ್ಚಿಸಿದೆವು. ಉಭಯ ದೇಶಗಳು ಪರಸ್ಪರ ವಿಶ್ವಾಸ ವೃದ್ಧಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಅನ್ಯ ರಾಷ್ಟ್ರದ ನೆರವಿಲ್ಲದೆಯೇ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಎರಡೂ ದೇಶಗಳು ಸಮರ್ಥವಾಗಿಯೇ ಇವೆ~ ಎಂದು ಸೆರ್ಗೆ ಲವರ್ವೊ ಹೇಳಿದರು.
ಪಾಕ್ ನೆಲದಲ್ಲಿ ಅಮೆರಿಕದ `ಡ್ರೋಣ್~ ಕಾರ್ಯಾಚರಣೆ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದ ರಬ್ಬಾನಿ ಖರ್ ಅವರ ಮಾತಿಗೆ ಲವರ್ವೊ ಬೆಂಬಲ ವ್ಯಕ್ತಪಡಿಸಿದರು.
ರಷ್ಯಾ ಮತ್ತು ಪಾಕ್ನ ಉನ್ನತ ಮಟ್ಟದ ನಿಯೋಗವು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ. ಆಫ್ಘಾನಿಸ್ತಾನ, ಸಿರಿಯಾ, ಇರಾನಿನ ಪರಮಾಣು ಕಾರ್ಯಕ್ರಮಗಳ ಕುರಿತೂ ಚರ್ಚಿಸಿದೆ.