ಹಾವೇರಿ: `ಬಯಲು ಸೀಮೆಯ ರೈತರಿಗೆ ವರದಾನವಾಗಿರುವ ಕಿಲಾರಿ (ಎತ್ತು) ತಳಿಗಳನ್ನು ದೀರ್ಘಾಯುಷ್ಯವುಳ್ಳ ತಳಿಯಾಗಿ ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ಒದಗಿಸಲಾಗುವುದು~ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿರುವ ರಾಜ್ಯದ ಏಕೈಕ ಕಿಲಾರಿ ತಳಿ ಸಂವರ್ಧನಾ ಕೇಂದ್ರದಲ್ಲಿ 24 ಲಕ್ಷ ರೂಪಾಯಿ ವೆಚ್ಚದಲ್ಲಿ ಕರು ಸಾಕಾಣಿಕೆ ಹಾಗೂ 36 ಲಕ್ಷ ರೂಪಾಯಿ ವೆಚ್ಚದಲ್ಲಿ ಹಸು ಸಾಕಾಣಿಕೆ ಶೆಡ್ ನಿರ್ಮಾಣ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ದೊಡ್ಡ ಸಂಪತ್ತಾಗಿರುವ ಕಿಲಾರಿ ತಳಿಯು ಹೆಚ್ಚಿನ ಶಕ್ತಿ ಹಾಗೂ ಬಯಲುಸೀಮೆ ಮಣ್ಣಿನಲ್ಲಿ ಉಳುಮೆ ಮಾಡಲು ಅತ್ಯುತ್ತಮ ಜಾನುವಾರು ಆಗಿದೆ. ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಈ ತಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂತಹ ತಳಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಮುಂದಾಗಬೇಕಿದೆ ಎಂದರು.
ಶೆಡ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ದೇಶಿ ತಳಿಯಾದ ಕಿಲಾರಿ ತಳಿ ಅಭಿವೃದ್ಧಿಯಲ್ಲಿ ಬಂಕಾಪುರ ತಳಿ ಸಂವರ್ಧನಾ ಕೇಂದ್ರ ಉತ್ತಮ ಕೆಲಸ ಮಾಡುತ್ತಿದೆ. ಇನ್ನು ಮುಂದೆ ಕೆಲಸದ ಜತೆಗೆ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದರು.
ಬೆಳಗಾವಿ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿ.ಪಂ.ಸದಸ್ಯರಾದ ಶಶಿಧರ ಹೊನ್ನಣ್ಣನವರ, ಸರೋಜಮ್ಮ ಆಡಿನ, ತಾ.ಪಂ. ಅಧ್ಯಕ್ಷ ವೀರನಗೌಡ ಪಾಟೀಲ, ಉಪಾಧ್ಯಕ್ಷೆ ಶಾಂತಮ್ಮ ಬೊಮ್ಮನಹಳ್ಳಿ, ಸದಸ್ಯರಾದ ಉಷಾ ಬಿಳಿಕುದರಿ, ಸುಜಾತಾ ಕಲಕೋಟಿ, ಮುಖಂಡರಾದ ಮಹಾದೇವಪ್ಪ ಚಾಕಲಬ್ಬಿ, ವೆಂಕಣ್ಣ ಮುಳಗುಂದ, ಸಣ್ಣಪ್ಪ ಗುಳಪ್ಪನವರ ಹಾಗೂ ಕಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಪರಮೇಶ್ವರ ನಾಯಕ ಹಾಜರಿದ್ದರು.