ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ಮಂಗಳವಾರ `ಕುರಿ' ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು.
2013-14ನೇ ಸಾಲಿನ ಪರಿಷ್ಕೃತ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `ಬಜೆಟ್ನಲ್ಲಿ ಕುರಿ ಅಥವಾ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ 3 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ. ಆದರೆ ಈ ಪರಿಹಾರವನ್ನು ಕೇವಲ ಕುರಿಗಳಿಗೆ ಮಾತ್ರ ಸೀಮಿತಗೊಳಿಸದೆ ಎತ್ತು ಹಾಗೂ ಇತರ ಜಾನುವಾರುಗಳು ಮೃತಪಟ್ಟಾಗಲೂ ನೀಡುವಂತಾಗಬೇಕು' ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎಸ್.ಆರ್. ಪಾಟೀಲ್, `ಕುರಿ ಎಂದರೆ ಲಕ್ಷ್ಮಿ ಇದ್ದಂತೆ! ಲಕ್ಷ್ಮಿ ಎಂದರೆ ಹಣ. ಹಣ ಎಂದರೆ ಬಜೆಟ್. ಇದಕ್ಕಾಗಿ ಕುರಿಗೆ ಬಜೆಟ್ನಲ್ಲಿ ಸಹಜವಾಗಿಯೇ ಪ್ರಾತಿನಿಧ್ಯ ದೊರೆತಿದೆ' ಎಂದು ಅರ್ಥೈಸಿದರು.
ಪಾಟೀಲ್ ಅವರ ಈ ಮಾತಿಗೆ ದನಿಗೂಡಿಸಿದ ಜೆಡಿಎಸ್ನ ಬಸವರಾಜ ಹೊರಟ್ಟಿ, `ಕುರಿ ಲಕ್ಷ್ಮಿ ಎನ್ನುವುದಾದರೆ ಅದರ ವಧೆ ನಿಲ್ಲಿಸಬೇಕು. ಕುರಿಯನ್ನು ಬಲಿ ಕೊಡಬಾರದು' ಎಂಬ ತರ್ಕ ಮಂಡಿಸಿದರು. ಮಹಾತ್ಮಾ ಗಾಂಧೀಜಿಯವರು ಮೇಕೆ ಹಾಲನ್ನೇ ಕುಡಿಯುತ್ತಿದ್ದರು ಎಂಬುದನ್ನು ನೆನಪಿಸುತ್ತಲೇ, `ಸರ್ಕಾರ ಕುರಿ ಮತ್ತು ಮೇಕೆ ಡೈರಿ ಸ್ಥಾಪನೆಯನ್ನು ಪ್ರಕಟಿಸಬೇಕು' ಎಂಬ ಸಲಹೆ ನೀಡಿದರು.
ಹೊರಟ್ಟಿಯವರ ತರ್ಕಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು `ಆರೋಗ್ಯಕ್ಕೆ ಮೇಕೆ ಹಾಲು ಉತ್ತಮ' ಎಂದೆನ್ನೆತ್ತಾ ತಲೆದೂಗಿದರು.
`ಕುರಿ ರಾಷ್ಟ್ರೀಯ ಪ್ರಾಣಿ ಆಗಲಿ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಬಜೆಟ್ ದಿನವೂ ವಿಧಾನಸೌಧಕ್ಕೆ ಕುರಿ ಬಂದಿತ್ತು. ಅದೇ ರೀತಿ ಕಾಂಗ್ರೆಸ್ಗೂ ಒಂದು ಪ್ರಾಣಿ ಕೊಡೋಣ' ಎಂದು ಸದಾನಂದಗೌಡರು ಚರ್ಚೆಗೆ ಹಾಸ್ಯದ ಲೇಪನ ನೀಡಲು ಯತ್ನಿಸಿದರು.