ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿಗಳ ಸಾವು: ಪರಿಹಾರಕ್ಕೆ ಆಗ್ರಹ

Last Updated 11 ಜನವರಿ 2014, 6:56 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಸೈದಾಪುರ ಗ್ರಾಮದ ಮೂವರು ರಸ್ತೆ ಅಪಘಾತದಲ್ಲಿ ಗುರುವಾರ ತಡ ರಾತ್ರಿಯಲ್ಲಿ ಮೃತಪಟ್ಟ ಸುದ್ದಿ ತಿಳಿದ ಕುಟುಂಬದ ಸದಸ್ಯರಿಗೆ  ಸಿಡಿಲು ಬಡಿದ ಅನುಭವ. ಅದರಲ್ಲಿ ಗ್ರಾಮದ ಜನತೆಯಲ್ಲಿ ಮೌನ ಆವರಿಸಿತು.

ಸೈದಾಪುರ ಗ್ರಾಮದಲ್ಲಿ ಹೆಚ್ಚಾಗಿ ಕುರುಬ ಸಮುದಾಯದವರು ವಾಸ­ವಾಗಿ­ದ್ದಾರೆ. ಬದುಕಿನ ನಿರ್ವಹಣೆಗೆ ಕುರಿ ಸಾಕಾಣಿಕೆ ಮಾಡಿಕೊಂಡು ಉಪ ಜೀವನ ನಡೆಸುತ್ತಿದ್ದಾರೆ. ಪ್ರತಿ ವರ್ಷ ಸಾಮಾನ್ಯವಾಗಿ ಒಣ ಬೇಸಾಯ ಪ್ರದೇಶದ ನೆರೆ ತಾಲ್ಲೂಕುಗಳಿಗೆ  ತೊಗರಿ ಬೆಳೆ ಕಟಾವು ಆದ ಕಡೆಗೆ ಕುರಿಗಳನ್ನು ಮೇಯಿಸಲು ತೆಗೆದು­ಕೊಂಡು ಹೋಗುತ್ತಾರೆ.

ಅದರಂತೆ ನಿಂಗಪ್ಪ ಹಾಗೂ ಸಹೋದರ ಯಂಕಣ್ಣ ಹಾಗೂ ಕೂಲಿ ಕೆಲಸಕ್ಕೆ ಎಂದು ನೇಮಿಸಿಕೊಂಡಿದ್ದ ಮಡಿವಾ­ಳಪ್ಪ ಹಾಗೂ ಇನ್ನಿತರರು ಕೂಡಿ ತೆರ­ಳಿದ್ದಾಗ ಮಾರ್ಗ ಮಧ್ಯದಲ್ಲಿ ಲಾರಿಯ ಡಿಕ್ಕಿ ಹೊಡೆಯಿತು. ಮೃತ ಯಂಕಣ್ಣನ ಮದುವೆಯಾಗಿ ವರ್ಷವೂ ಪೂರ್ಣಗೊಂಡಿಲ್ಲ. ನಿಂಗಪ್ಪ­ನಿಗೆ 2 ವರ್ಷದ ಮಗುವಿದೆ.

ಆಕ್ರೋಶ: ‘ತಹಶೀಲ್ದಾರ್‌ ಡಿ.ವೈ. ಪಾಟೀಲರಿಗೆ ಇದರ ಬಗ್ಗೆ ಅರಿವು ಸಹ ಇಲ್ಲ. ಸೌಜನ್ಯಕ್ಕಾದರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳದೆ ನಿಷ್ಕಾಳಜಿಯನ್ನು ತೋರಿಸಿ­ದ್ದಾರೆ’ ಎಂದು ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ
ವಿಭೂತಿ­ಹಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒತ್ತಾಯ: ಜಿಲ್ಲಾ ಉಸ್ತುವಾರಿ ಸಚಿವರು  ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ ₨5 ಲಕ್ಷ ಪರಿಹಾರ ನೀಡಬೇಕು. ಲಾರಿ ಚಾಲಕನನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳ­ಪಡಿಸಬೇಕು. ಕುರಿಗಾಹಿಗರಿಗೆ ಜೀವ ವಿಮೆ ಮಾಡಿಸಬೇಕು. ಅಪಘಾತದಲ್ಲಿ ಮೃತಪಟ್ಟ 31 ಕುರಿಗಳ ಪರಿಹಾರ­ವಾಗಿ ₨ 3ಲಕ್ಷ ನೀಡಬೇಕು ಎಂದು ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಗಿರೆಪ್ಪಗೌಡ ಬಾಣತಿಹಾಳ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ದೌಡು: ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪೂರ, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜಪ್ಪ­ಗೌಡ ದರ್ಶನಾಪೂರ, ಮಲ್ಲಿ­ಕಾ­ರ್ಜುನ ಕರಿಗುಡ್ಡ ಲಾಲಅಹ್ಮದ ಖುರೇಶಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರಗೌಡ ಶಿರವಾಳ ಮತ್ತಿತರರು ದೌಡಾಯಿಸಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT