ಶಹಾಪುರ: ತಾಲ್ಲೂಕಿನ ಸೈದಾಪುರ ಗ್ರಾಮದ ಮೂವರು ರಸ್ತೆ ಅಪಘಾತದಲ್ಲಿ ಗುರುವಾರ ತಡ ರಾತ್ರಿಯಲ್ಲಿ ಮೃತಪಟ್ಟ ಸುದ್ದಿ ತಿಳಿದ ಕುಟುಂಬದ ಸದಸ್ಯರಿಗೆ ಸಿಡಿಲು ಬಡಿದ ಅನುಭವ. ಅದರಲ್ಲಿ ಗ್ರಾಮದ ಜನತೆಯಲ್ಲಿ ಮೌನ ಆವರಿಸಿತು.
ಸೈದಾಪುರ ಗ್ರಾಮದಲ್ಲಿ ಹೆಚ್ಚಾಗಿ ಕುರುಬ ಸಮುದಾಯದವರು ವಾಸವಾಗಿದ್ದಾರೆ. ಬದುಕಿನ ನಿರ್ವಹಣೆಗೆ ಕುರಿ ಸಾಕಾಣಿಕೆ ಮಾಡಿಕೊಂಡು ಉಪ ಜೀವನ ನಡೆಸುತ್ತಿದ್ದಾರೆ. ಪ್ರತಿ ವರ್ಷ ಸಾಮಾನ್ಯವಾಗಿ ಒಣ ಬೇಸಾಯ ಪ್ರದೇಶದ ನೆರೆ ತಾಲ್ಲೂಕುಗಳಿಗೆ ತೊಗರಿ ಬೆಳೆ ಕಟಾವು ಆದ ಕಡೆಗೆ ಕುರಿಗಳನ್ನು ಮೇಯಿಸಲು ತೆಗೆದುಕೊಂಡು ಹೋಗುತ್ತಾರೆ.
ಅದರಂತೆ ನಿಂಗಪ್ಪ ಹಾಗೂ ಸಹೋದರ ಯಂಕಣ್ಣ ಹಾಗೂ ಕೂಲಿ ಕೆಲಸಕ್ಕೆ ಎಂದು ನೇಮಿಸಿಕೊಂಡಿದ್ದ ಮಡಿವಾಳಪ್ಪ ಹಾಗೂ ಇನ್ನಿತರರು ಕೂಡಿ ತೆರಳಿದ್ದಾಗ ಮಾರ್ಗ ಮಧ್ಯದಲ್ಲಿ ಲಾರಿಯ ಡಿಕ್ಕಿ ಹೊಡೆಯಿತು. ಮೃತ ಯಂಕಣ್ಣನ ಮದುವೆಯಾಗಿ ವರ್ಷವೂ ಪೂರ್ಣಗೊಂಡಿಲ್ಲ. ನಿಂಗಪ್ಪನಿಗೆ 2 ವರ್ಷದ ಮಗುವಿದೆ.
ಆಕ್ರೋಶ: ‘ತಹಶೀಲ್ದಾರ್ ಡಿ.ವೈ. ಪಾಟೀಲರಿಗೆ ಇದರ ಬಗ್ಗೆ ಅರಿವು ಸಹ ಇಲ್ಲ. ಸೌಜನ್ಯಕ್ಕಾದರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳದೆ ನಿಷ್ಕಾಳಜಿಯನ್ನು ತೋರಿಸಿದ್ದಾರೆ’ ಎಂದು ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ
ವಿಭೂತಿಹಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒತ್ತಾಯ: ಜಿಲ್ಲಾ ಉಸ್ತುವಾರಿ ಸಚಿವರು ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ ₨5 ಲಕ್ಷ ಪರಿಹಾರ ನೀಡಬೇಕು. ಲಾರಿ ಚಾಲಕನನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಕುರಿಗಾಹಿಗರಿಗೆ ಜೀವ ವಿಮೆ ಮಾಡಿಸಬೇಕು. ಅಪಘಾತದಲ್ಲಿ ಮೃತಪಟ್ಟ 31 ಕುರಿಗಳ ಪರಿಹಾರವಾಗಿ ₨ 3ಲಕ್ಷ ನೀಡಬೇಕು ಎಂದು ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಗಿರೆಪ್ಪಗೌಡ ಬಾಣತಿಹಾಳ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ದೌಡು: ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪೂರ, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜಪ್ಪಗೌಡ ದರ್ಶನಾಪೂರ, ಮಲ್ಲಿಕಾರ್ಜುನ ಕರಿಗುಡ್ಡ ಲಾಲಅಹ್ಮದ ಖುರೇಶಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರಗೌಡ ಶಿರವಾಳ ಮತ್ತಿತರರು ದೌಡಾಯಿಸಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.