ಚಿಂತಾಮಣಿ: ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಜೈವಿಕ ಇಂಧನ ಬೀಜಗಳ ಖರೀದಿಗೆ ಪ್ರೋತ್ಸಾಹ ಬೇಕಿದೆ. ಇದಕ್ಕಾಗಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ ಇಲ್ಲಿನ ಕುರುಬೂರಿನ ರೇಷ್ಮೇ ಕೃಷಿ ಕಾಲೇಜಿನಲ್ಲಿ ಜೈವಿಕ ಇಂಧನ ಬೀಜ ಖರೀದಿ ಕೇಂದ್ರ ಆರಂಭವಾಗಲಿದೆ ಎಂದು ಸಂಶೋಧಕ ಸಿ.ಸೀನಪ್ಪ ಹೇಳಿದರು.
ತಾಲ್ಲೂಕಿನ ಕತ್ತರಿಗುಪ್ಪೆ ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯ, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ವತಿಯಿಂದ ಬುಧವಾರ ನಡೆದ ಪಶುಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮಧ್ಯವರ್ತಿಗಳಿಂದ ಬಿಡುಗಡೆ ಯಾಗುವ ದೃಷ್ಠಿಯಿಂದ ಮಂಡಳಿಯೇ ನೇರವಾಗಿ ರೈತರಿಂದ ಬೀಜ ಕೊಂಡು ಕೊಳ್ಳುವ ಏರ್ಪಡಿಸಲಾಗಿದೆ. ರೈತರು ಇಂಧನ ಬೀಜಗಳನ್ನು ಬೆಳೆಯುವುದರ ಮೂಲಕ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಎಲ್ಲಾ 17 ಜೈವಿಕ ಇಂಧನ ಮಾಹಿತಿ ಹಾಗೂ ಉತ್ಪಾದನ ಕೇಂದ್ರಗಳಲ್ಲಿ ಮತ್ತು ಆಯ್ದ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಶೇ.6ರಿಂದ 10ರಷ್ಟು ತೇವಾಂಶ ಹೊಂದಿರುವ ಜೈವಿಕ ಬೀಜ ಉತ್ತಮ ದರಗಳಲ್ಲಿ ಖರೀದಿಸಲಾಗುತ್ತಿದೆ. ವಿವರ ಗಳಿಗೆ 9448662226 ಅನ್ನು ಸಂಪರ್ಕಿಸಬಹುದು ಎಂದು ಸೀನಪ್ಪ ಮಾಹಿತಿ ನೀಡಿದರು.
ಜನಪದ ಕಲಾವಿದ ನರಮಾಕಲಹಳ್ಳಿ ಮುನಿರೆಡ್ಡಿ ಮತ್ತು ತಂಡದವರಿಂದ ಪರಿಸರ ಗೀತೆ ಪ್ರಸ್ತುತ ಪಡಿಸಿದರು.
ಕತ್ತರಿಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿಪತಿ ರೆಡ್ಡಿ, ಡಾ.ಸಿ.ಎಂ. ಸುಧಾಕರ್, ಕೃಷಿ ಬೀಜ ಮತ್ತು ಔಷಧಿ ಮಾರಾಟಗಾರರ ಸಂಘದ ಡಾ.ಶಿವಣ್ಣ, ರೈತ ಮುಖಂಡ ಬಿ.ಎನ್.ನಾರಾ ಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮುನಾಂಜನಪ್ಪ ಭಾಗವಹಿಸಿದ್ದರು.