ದಾವಣಗೆರೆ: `ಕೊರಚ, ಕೊರಮ ಮತ್ತು ಕೊರವರ್ ಜನಾಂಗಗಳನ್ನು ಒಂದೇ ವೇದಿಕೆಯಡಿ `ಕುಳುವ~ ಸಮಾಜ ಎಂದು ಏಕೀಕರಣಗೊಳಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು ಎಂದು ಸಮಾಜದ ಹಿರಿಯ ಮುಖಂಡ ನಾಗೇಂದ್ರ ಬಂಡೀಕರ್ ತಿಳಿಸಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಭಾನುವಾರ ಜಿಲ್ಲಾ ಕುಳುವ ಸಮಾಜದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಳುವ ಸಮಾಜದ ಎಲ್ಲಾ ಒಳಪಂಗಡಗಳು ಸಂಘಟನೆಗೊಂಡು ಏಕೀಕರಣಗೊಳ್ಳಬೇಕು. ಈ ನಿಟ್ಟಿನಲ್ಲಿ ಒಳಪಂಗಡಗಳು ಪರಸ್ಪರ ಕೊಡು-ಕೊಳ್ಳುವಿಕೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಕುಳುವ ಸಮಾಜಕ್ಕೆ ಪರಿಶಿಷ್ಟ ಜಾತಿಯಂತೆ ಮೀಸಲಾತಿ ಸೌಲಭ್ಯವನ್ನು ಸರ್ಕಾರ ಕಲ್ಪಿಸಬೇಕು. ಅಲ್ಲದೇ, ಸಮಾಜದ ಸರ್ವಾಂಗೀಣ ಏಳ್ಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಸಮಾಜದ ನಿವೇಶನದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ, ಸಮಾಜದ ನುಲಿಯ ಚಂದಯ್ಯ ಗುರುಪೀಠಕ್ಕೆ ಪೀಠಾಧಿಪತಿಗಳನ್ನಾಗಿ ನೂತನ ಸ್ವಾಮೀಜಿ ನೇಮಿಸಬೇಕು. ಹಂದಿ ಸಾಕಾಣಿಕೆ, ಹಗ್ಗ ನೇಯ್ಗೆ, ಬುಟ್ಟಿ ತಯಾರಿಕೆ, ನಿವೇಶನ ಪಡೆಯುವಿಕೆ, ಸಮಾಜದ ಜಿಲ್ಲಾ ಸಂಘದ ಪದಾಧಿಕಾರಿಗಳ ನೇಮಕ, ಸಮಾಜದ ಜಿಲ್ಲಾ ಕಚೇರಿ ಸ್ಥಾಪನೆ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಕುಳುವ ಸಮಾಜದ ಮುಖಂಡರಾದ ಅಂತರರಾಷ್ಟ್ರೀಯ ಕ್ರೀಡಾಪಟು ಕೆ. ಗಂಗಪ್ಪ, ಪಾಲಿಕೆ ಸದಸ್ಯ ಬಿ. ಪರಶುರಾಂ, ಎಂ. ನಾಗರಾಜ್, ಕೆ.ಎನ್. ಓಂಕಾರಪ್ಪ, ಜಿ. ಕೃಷ್ಣಪ್ಪ ಮತ್ತು ವಿವಿಧ ತಾಲ್ಲೂಕುಗಳ ಸಮಾಜದ ಸಂಘಟನಾಕಾರರು ಪಾಲ್ಗೊಂಡಿದ್ದರು.