ಭದ್ರಾವತಿ: ಕುವೆಂಪು ವಿವಿ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡದಿದ್ದರೂ, ನಕಲಿ ಅಂಕಪಟ್ಟಿ ಪಡೆದು, ಪದವೀಧರ ಎನಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು ಜಾಲಹಳ್ಳಿ ನಿವಾಸಿ ಲಿಖಿತ್ (34) ಬಂಧಿತ ಆರೋಪಿ.
ಈತ 2007-08ನೇ ಸಾಲಿನಲ್ಲಿ ಬೆಂಗಳೂರು ಸಂಭ್ರಮ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿ.
ಅಲ್ಲಿ ಮೊದಲ ಸೆಮಿಸ್ಟರ್ ಅನುತ್ತೀರ್ಣನಾದ ನಂತರ ಈತ ತನ್ನ ವ್ಯಾಸಂಗವನ್ನು ಸ್ಥಗಿತ ಮಾಡಿದ್ದ. ಆದರೆ, ದಾವಣಗೆರೆ ಶಿವಶಂಕರ್ ಎಂಬುವರ ಮೂಲಕ ನಕಲಿ ಜಾಲದ ಸಂಪರ್ಕ ಪಡೆದ ಲಿಖಿತ್, ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ರೀತಿಯಲ್ಲಿ 2011ರ ನವೆಂಬರ್ನಲ್ಲಿ ಎಂಟು ಅಂಕಪಟ್ಟಿ ಸಂಪಾದಿಸಿದ್ದ.
ಈ ಎಲ್ಲಾ ನಕಲಿ ಅಂಕಪಟ್ಟಿ ಮೂಲಕ ಲಿಖಿತ್ ಬಿಇ ಕಂಪ್ಯೂಟರ್ ಸೈನ್ಸ್ ಪದವೀಧರ ಎಂಬ ಹೆಗ್ಗಳಿಕೆಗೆ ಸಹ ಪಾತ್ರನಾಗಿದ್ದ. ಅದಕ್ಕಾಗಿ ಈತ ಖರ್ಚು ಮಾಡಿದ್ದು ಬರೋಬ್ಬರಿ ರೂ. 60,000 ಎಂದು ತನಿಖೆಯಿಂದ ತಿಳಿದುಬಂದಿದೆ.
ಲಿಖಿತ್ ಬಂಧನದಿಂದ ಇಲ್ಲಿಯ ತನಕ, ಈ ಪ್ರಕರಣದಲ್ಲಿ ಪೊಲೀಸರು 26 ಮಂದಿಯನ್ನು ಬಂಧಿಸಿ ಕ್ರಮ ಜರುಗಿಸಿದಂತಾಗಿದೆ.
ಗುರುವಾರ ಸಹ ಡಿವೈಎಸ್ಪಿ ಶ್ರೀಧರ್ ನೇತೃತ್ವದ ತನಿಖಾ ತಂಡ ವಿವಿ ಸುತ್ತಲಿನ ಪ್ರದೇಶದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುವ ಕಾರ್ಯವನ್ನು ನಡೆಸಿದ್ದು, ಹಲವರನ್ನು ಕರೆಸಿ ವಿಚಾರಣೆ ಸಹ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.