ಚೆನ್ನೈ (ಪಿಟಿಐ): ಕೂಡುಂಕುಳಂ ಅಣು ವಿದ್ಯುತ್ ಸ್ಥಾವರ ಆರಂಭದ ವಿಚಾರದಲ್ಲಿ ಆಗಿರುವ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಷ್ಯ, ಅದು ಈಗಲೇ ಕಾರ್ಯಾರಂಭಿಸಬೇಕು ಮತ್ತು ಸುರಕ್ಷಿತ ಸ್ಥಾವರ ಆಗಿರುವ ಅದನ್ನು ಆರಂಭಿಸಲು `ಚಳವಳಿ~ ನಡೆಸಬೇಕೇ ಹೊರತು `ಸಾಯಿಸುವುದಕ್ಕೆ~ ಅಲ್ಲ ಎಂದು ಹೇಳಿದೆ.
ಭಾರತದಲ್ಲಿನ ರಷ್ಯ ರಾಯಭಾರಿ ಅಲೆಕ್ಸಾಂಡರ್ ಎಂ. ಕಡಕಿನ್ ಅವರು `ಯಂತ್ರಗಳು ಈಗಲೇ ಕೆಲಸ ಮಾಡಲು ಆರಂಭಿಸಬೇಕು. ಹಲವು ವಾರಗಳ ಕಾಲ ಕೆಲಸ ಸ್ಥಗಿತಗೊಂಡರೆ ಅವುಗಳ ನಿರ್ವಹಣೆಗೆ ಸಾಕಷ್ಟು ಸಮಯ ಮತ್ತು ಅಪಾರ ಪ್ರಮಾಣದಲ್ಲಿ ಹಣ ವ್ಯಯ ಮಾಡಬೇಕಾಗುತ್ತದೆ~ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
`ಕೂಡುಂಕುಳಂ ಯೋಜನೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಭಾರತದ ಆಂತರಿಕ ವಿಷಯವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಇದನ್ನು ಬಗೆಹರಿಸಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.
`ಸ್ಥಾವರ ಕೆಲಸ ಆರಂಭಿಸುವ ಕುರಿತು ಭಾರತದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಅವರ (ಭಾರತ) ಮೇಲೆ ಒತ್ತಡ ಹೇರಿಲ್ಲ. ಹೇರುವುದೂ ಇಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ಕೂಡಿ ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಲಿವೆ~ ಎಂದು ಹೇಳಿದರು.
`ಸುರಕ್ಷತೆ ಪ್ರಶ್ನಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಯಿಂದ ಹಲವು ತಿಂಗಳುಗಳಿಂದ ಕೂಡುಂಕುಳಂನಲ್ಲಿ ಕೆಲಸ ಆರಂಭಿಸಲು ಆಗಿಲ್ಲ. ಕೆಲಸ ಕೈಗೊಳ್ಳಲು ಆಗಮಿಸಿರುವ ರಷ್ಯದ ವಿಜ್ಞಾನಿಗಳು ಅನಿರ್ದಿಷ್ಟ ಅವಧಿಯವರೆಗೆ ಸುಮ್ಮನೆ ಕೂಡಲು ಆಗುವುದಿಲ್ಲ. ಹೀಗಾಗಿ ಒಂದು ದಿನ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಬೇಕಾಗುತ್ತದೆ. ವಿಜ್ಞಾನಿಗಳ ಅವಶ್ಯಕತೆ ನಮಗೆ ಇದೆ~ ಎಂದು ಹೇಳಿದರು.
ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಸ್ಥಾವರ ವಿರೋಧಿ ಪ್ರತಿಭಟನೆಯ ಹಿಂದೆ ಬಾಹ್ಯ ಶಕ್ತಿ ಕೈವಾಡ ಇರಬಹುದೇ? ಎಂಬ ಪ್ರಶ್ನೆಗೆ, `ಈ ಬಗ್ಗೆ ನಿಮ್ಮ ಸರ್ಕಾರವೇತೀರ್ಮಾನಿಸಲಿ~ ಎಂದರು. ಸೂಚ್ಯವಾಗಿ ನುಡಿದರು.
`ಸುದೀರ್ಘ ಕಾಲದಿಂದ ನಡೆಯುತ್ತಿರುವ ಈ ಪ್ರತಿಭಟನೆಯನ್ನು ನೋಡಿದರೆ ಹೊರಗಿನಿಂದ ಹಣ ಬರುತ್ತಿರುವ ಬಗ್ಗೆ ಸಂಶಯ ಇದೆ~ ಎಂದು ಹೇಳಿದರು.