ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ರಾಜ್ಯದಿಂದ ಒಂದು ಸಾವಿರ ರೈತರನ್ನು ಇಸ್ರೇಲ್ಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ನಗರದಲ್ಲಿ ಸೋಮವಾರ ಜಿಲ್ಲಾಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆಯಿಂದ 4 ಮಂದಿಯನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ಬಾರಿ 120 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅವರ ಜತೆ 8 ಮಂದಿ ಅಧಿಕಾರಿಗಳು ತೆರಳುತ್ತಿದ್ದಾರೆ ಎಂದು ತಿಳಿಸಿದರು.
ಅರ್ಹತೆ: ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ 50 ವರ್ಷದ ಒಳಗಿನ ರೈತರು ಅರ್ಹರು. ಪ್ರವಾಸಕ್ಕೆ ್ಙ 1 ಲಕ್ಷ ತಗುಲುತ್ತದೆ. ್ಙ 25 ಸಾವಿರ ರೈತರು ಭರಿಸಬೇಕು. ಪ್ರವಾಸವು 7ರಿಂದ 8 ದಿನಗಳ ಅವಧಿಯದ್ದಾಗಿದೆ ಎಂದು ಹೇಳಿದರು.
ಕಡಿಮೆ ನೀರು ಬಳಸಿ ಹೆಚ್ಚು ಬೆಳೆ, ಅದರಲ್ಲೂ ತೋಟಗಾರಿಕಾ ಬೆಳೆ ಬೆಳೆಯುವ ಬಗ್ಗೆ ಅಲ್ಲಿ ಮಾಹಿತಿ ಪಡೆಯಬಹುದು. ಯಂತ್ರೋಪಕರಣ ಬಳಕೆ, ಕಡಿಮೆ ಮಾನವ ಸಂಪನ್ಮೂಲ ಬಳಸಿ ಬೆಳೆ ತೆಗೆಯುವ ಬಗ್ಗೆ ತಿಳಿವಳಿಕೆ ಹೊಂದಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆಗೆ ಹಿಂದೆ ್ಙ 750 ಕೋಟಿ ಬಜೆಟ್ನಲ್ಲಿ ಮೀಸಲಿಡಲಾಗಿತ್ತು. ಈ ಬಾರಿ ರೂ 2 ಸಾವಿರ ಕೋಟಿ ಬೇಕು ಎಂದು ಬೇಡಿಕೆಯಿಟ್ಟಿದ್ದೇವೆ. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ 57 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ವರ್ಷದ್ದೂ ಸೇರಿ 20 ಲಕ್ಷ ಟನ್ ಕಬ್ಬು ಸಂಗ್ರಹ ಇದೆ. ಈ ವರ್ಷ 14 ಲಕ್ಷ ಟನ್ ಉತ್ಪಾದನೆಯಾಗಿದೆ. ಹಾಗಾಗಿ, ಸದ್ಯ ಯಾವುದೇ ಕೊರತೆ ಇಲ್ಲ.
ಸಕ್ಕರೆ ರಫ್ತು ಬಗ್ಗೆ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆದಿದೆ. ಈ ಸಂಬಂಧ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘವೂ ಶ್ರಮಿಸುತ್ತಿದೆ. ದಾವಣಗೆರೆಯ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆಯ ಮರು ಟೆಂಡರ್ ಸಲ್ಲಿಸಲು ಜ. 26 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ ಎಂದು ಹೇಳಿದರು.