ತೀರ್ಥಹಳ್ಳಿ: ಜಾಗತಿಕ ಸನ್ನಿವೇಶದಲ್ಲಿ ರೈತರ ಬದುಕು ದಾರುಣವಾಗಿದೆ. ಅವಜ್ಞೆಗೆ ಗುರಿಯಾದ ಕೃಷಿ ಬದುಕನ್ನು ಸುಧಾರಿಸುವ ಪ್ರಯತ್ನ ಜಾನಪದ ವಿಶ್ವವಿದ್ಯಾಲಯದಿಂದ ಆಗಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಹೇಳಿದರು.
ಸಮೀಪದ ಕುಪ್ಪಳಿಯಲ್ಲಿ ಶುಕ್ರವಾರ ಜಾನಪದ ವಿಶ್ವವಿದ್ಯಾಲಯ ಆಯೋಜಿಸಿದ್ದ `ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶ~ ಕುರಿತ ಕಮ್ಮಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನಪದ ತಜ್ಞ ಗೋ.ರು. ಚನ್ನಬಸಪ್ಪ ಅವರ ಸಲಹೆಯಂತೆ ಈಗಾಗಲೇ ಗ್ರಾಮ ಚರಿತ್ರಾ ಕೋಶ, ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶ, ಗ್ರಾಮ ಕರ್ನಾಟಕ ಯೋಜನೆ, ಕಿರು ಸಂಶೋಧನಾ ಯೋಜನೆ, ಜಾನಪದ ಭಾಷಾಂತರ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅಂಬಳಿಕೆ ಹಿರಿಯಣ್ಣ ನುಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಕೆ. ರಮೇಶ್ ಕಮ್ಮಟ ಉದ್ಘಾಟಿಸಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್ವಿಯಸ್ ಸುಂದರಂ, ಮದ್ರಾಸ್ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೃಷ್ಣಭಟ್ ಅರ್ತಿಕಜೆ, ಕುರುವಳ್ಳಿ ಪುರುಷೋತ್ತಮ ಕೃಷಿ ಸಂಶೋಧನಾ ಕೇಂದ್ರದ ಅರುಣ್ಕುಮಾರ್ ಮಾತನಾಡಿದರು.
ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶದ ಸಂಪಾದಕ ಹಾಗೂ ಕರ್ನಾಟಕ ಜಾನಪದ ವಿವಿ ಕುಲಸಚಿವ ಾ.ಸ.ಚಿ. ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಡಾ.ಎಂ.ಎನ್. ವೆಂಕಟೇಶ್ ಸ್ವಾಗತಿಸಿದರು. ಸಾಯಿಗೀತಾ ಪ್ರಾರ್ಥಿಸಿದರು. ಡಾ.ಕೆ. ಕಮಲಾಕ್ಷ ವಂದಿಸಿದರು.