ಬಾಣಾವರ: ಕೃಷಿಯಲ್ಲಿ ಲಘು ಪೋಷಕಾಂಶ ಬಳಕೆ, ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಉತ್ತಮ ಇಳುವರಿ, ಅಧಿಕ ಲಾಭ ಪಡೆಯಬಹುದು ಎಂದು ಬಾಣಾವರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಪಿ.ಮಿಥುನ್ ತಿಳಿಸಿದರು.
ಹೋಬಳಿಯ ಕೋರನಹಳ್ಳಿಯ ಕೊಪ್ಪಲು ಗ್ರಾಮದಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಚೇತನ ಗುಚ್ಛ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರಿಗೆ ಇಲಾಖೆಯಿಂದ ದೊರೆಯುವ ಕೃಷಿ ಪರಿಕರಗಳು ಹಾಗೂ ಭೂ ಚೇತನ ಯೋಜನೆಯ ಮಹತ್ವ, ಮಣ್ಣಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಗೋಮ್ಮಟೇಶನಾಯ್ಕ ಮಾತನಾಡಿ ರೈತರ ಬೆಳೆಗಳಿಗೆ ಬೇಕಾದ ಲಘು ಪೋಷಕಾಂಶಗಳು, ಬಳಕೆ ವಿಧಾನ ಹಾಗೂ ಬೀಜೋಪಚಾರ ಬಗ್ಗೆ ಮಾಹಿತಿ ನೀಡಿದರು.
ಕೋರನಹಳ್ಳಿ ಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಾಮಿನಾಯ್ಕ, ರೈತ ಅನುವುಗಾರರಾದ ತೇಜಪಾಲ್, ಆನಂದ್, ಶಶಿಧರ್, ದರ್ಶನ್, ಕುಮಾರ್, ಸತ್ಯನಾರಾಯಣ, ಸಿದ್ದಾನಾಯ್ಕ, ಮೋಹನರಾಜ್, ಪ್ರಕಾಶ್, ನೇತ್ರಾವತಿ, ಕವಿತ ಇದ್ದರು.