ಕೋಲ್ಕತ್ತ (ಪಿಟಿಐ/ಐಎಎನ್ಎಸ್): ನಮ್ಮ ಭಾಷೆ-ದೇಶ ಎನ್ನುವ ತತ್ವವನ್ನು ಸತ್ವಯುತವಾಗಿ ಪಾಲಿಸುವ ಪಶ್ವಿಮ ಬಂಗಾಳದ ಜನರು ಈಗ `ಕೆಕೆಆರ್~ ನಮ್ಮ ತಂಡವೆಂದು ಹೆಮ್ಮೆಪಡುತ್ತಿದ್ದಾರೆ.
ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಚಾಂಪಿಯನ್ ಪಟ್ಟವನ್ನು ಪಡೆದುಬಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಪಶ್ಚಿಮ ಬಂಗಾಳದ ರಾಜಧಾನಿಯ ಜನರು ಭವ್ಯ ಸ್ವಾಗತವನ್ನೇ ನೀಡಿದರು.
ವಿಜಯೋತ್ಸವ ಆಚರಿಸಲು ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಮಾರಂಭ ನಡೆದಾಗ ಭಾರಿ ಜನಸಾಗರವೇ ಹರಿದುಬಂತು. ವಿ
ಲಿಯಮ್ ಬ್ಲೇಕ್ ಬರೆದ `ಟೈಗರ್~ ಕವಿತೆಯಲ್ಲಿನ `ನೈಟ್ ನೈಟ್ ಬರ್ನಿಂಗ್ ಬ್ರೈಟ್~ ಸಾಲುಗಳು ನಗರದಲ್ಲಿ ಬೃಹತ್ ಫಲಕಗಳ ಮೇಲೆ ಹರಡಿಕೊಂಡವು. ನೈಟ್ರೈಡರ್ಸ್ ವಿಜಯವನ್ನು ಇಲ್ಲಿನ ಪೊಲೀಸ್ ಇಲಾಖೆ ರಸ್ತೆ ಸುರಕ್ಷತೆಯ ಪ್ರಚಾರಕ್ಕೆ ಕೂಡ ಅವಸರದಲ್ಲಿಯೇ ಬಳಸಿಕೊಂಡಿದ್ದೂ ಗಮನ ಸೆಳೆಯಿತು.
ಟ್ರೋಫಿ ಎತ್ತಿಕೊಂಡು ಬಂದ ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ನೈಟ್ರೈಡರ್ಸ್ ನಾಯಕ ಗೌತಮ್ ಗಂಭೀರ್ ಇದ್ದ ವಾಹನದ ಸುತ್ತ ಅಭಿಮಾನಿಗಳು ಮುತ್ತಿಕೊಂಡು `ಕೆಕೆಆರ್ ಸೂಪರ್ ಸ್ಟಾರ್~ ಎಂದು ಕೇಕೆ ಹಾಕಿದರು. `ಕರ್ಬೊ ಲಾಡ್ಬೊ ಜೀತ್ಬೊ ರೆ...~ ಎನ್ನುವ ನೈಟ್ರೈಡರ್ಸ್ ಗೀತೆಯು ಮಹಾನಗರದ ಮೂಲೆಮೂಲೆಯಲ್ಲಿ ಮೊಳಗಿತು.
ಪುಟ್ಟ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್ಗಳಲ್ಲಿನ ಟೆಲಿವಿಷನ್ ಪರದೆಗಳಲ್ಲಿ ವಿಜಯಿ ತಂಡದ ಸ್ವಾಗತದ ಚಿತ್ರಗಳು ರಾರಾಜಿಸಿದವು. ದಕ್ಷಿಣ ಕೋಲ್ಕತ್ತದ ಹಮ್ಜಾದಿಂದ ಈಡನ್ ಗಾರ್ಡನ್ವರೆಗೆ ಸಾಗಿದ ಮೆರವಣಿಗೆಯನ್ನು ನೋಡಲು ಮಾರ್ಗದುದ್ದಕ್ಕೂ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು ಗಮನ ಸೆಳೆಯಿತು. ಜತಿನ್ ದಾಸ್ ಪಾರ್ಕ್ನಲ್ಲಂತೂ ಗಂಭೀರ್ ಜೈಕಾರಗಳು ಮೊಳಗಿದವು. ದೆಹಲಿ ಬ್ಯಾಟ್ಸ್ಮನ್ನನ್ನು ಇಲ್ಲಿನ ಜನರು ತಮ್ಮವನೆನ್ನುವಂತೆ ಸ್ವೀಕರಿಸಿದ್ದು ವಿಶೇಷ.
ಈಡನ್ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ನುಗ್ಗಿದರೆ ನಿಯಂತ್ರಿಸುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಎಲ್ಲರಿಗೂ ಒಳಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಆದರೂ ಉತ್ಸಾಹಗುಂದದ ರೈಡರ್ಸ್ ಬೆಂಬಲಿಗರ ದಂಡು ಕ್ರೀಡಾಂಗಣದ ಹೊರಗೇ ಹಾಡಿ ಕುಣಿದಾಡಿದರು.
ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಕ್ರೀಡಾಂಗಣದ ಆಚೆಗೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ ಅವರಲ್ಲಿ ಕೆಲವರು ಅಡೆತಡೆಗಳನ್ನು ಉರುಳಿಸಿ ಒಳಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವುದು ಅನಿವಾರ್ಯವಾಯಿತು. ಆಗ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು.
ಆ ಹೊತ್ತಿಗಾಗಲೇ ಕ್ರೀಡಾಂಗಣದ ಒಳಗೆ ನಲ್ವತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ದೊಡ್ಡ ವೇದಿಕೆಯಲ್ಲಿ `ಬಾಲಿವುಡ್ ಕಿಂಗ್ ಖಾನ್~ ಹಾಗೂ ನಟಿ ಜೂಹಿ ಚಾವ್ಲಾ ಕಾಣಿಸಿಕೊಂಡಾಗ ಅಬ್ಬರದ ಸಂಗೀತ. ಖಾನ್ ಜೊತೆಗೆ ಗಂಭೀರ್ ಹಾಗೂ ಟಾಲಿವುಡ್ನ ಕೆಲವು ನಟರು ಕೂಡ ಬಂದು ಹೆಜ್ಜೆ ಹಾಕಿದರು.
ಬಾಂಗ್ಲಾಚಿತ್ರರಂಗದ ಕೆಲವು ನಿರ್ದೇಶಕರು ಮತ್ತು ನಟ-ನಟಿಯರೂ ಸಂಭ್ರಮದ ಸೊಬಗು ಹೆಚ್ಚಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ ನೇರವಾಗಿ ಖಾನ್ ಕಡೆಗೆ ಬಂದು ಕೆನ್ನೆಯ ಮೇಲೆ ಮೆಲ್ಲಗೆ ತಟ್ಟಿ ಅಭಿನಂದಿಸಿದರು. ಗಂಭೀರ್ ತಲೆಯ ಮೇಲೆ ಕೈಯಿಟ್ಟು ಆಶಿರ್ವದಿಸಿದರು. `
ದೀದಿ~ ಬೆನ್ನು ತಟ್ಟಿದಾಗ ಸ್ಥಳೀಯ ಆಟಗಾರ ಮನೋಜ್ ತಿವಾರಿ ಮೊಗದಲ್ಲಿ ಮಂದಹಾಸ ಅರಳಿತು. ರಾಜ್ಯಪಾಲ ಎಂ.ಕೆ.ನಾರಾಯಣನ್ ಹಾಗೂ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ಅವರೂ ನೈಟ್ರೈಡರ್ಸ್ ತಂಡದ ಈ ವಿಜಯೋತ್ಸವದಲ್ಲಿ ಪಾಲ್ಗೊಂಡರು.
ಒಂದೆಡೆ ಗಣ್ಯ ಅತಿಥಿಗಳು ಕೂಡ ಐಪಿಎಲ್ ಟ್ರೋಫಿಯೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ಉತ್ಸಾಹ ತೋರಿದ್ದರೆ, ಇನ್ನೊಂದೆಡೆ ವಿಶಾಲ ವೇದಿಕೆಯಲ್ಲಿ ಖಾನ್ ಜೊತೆಗೆ ಸಂಗೀತದ ಲಯಕ್ಕೆ ಹೆಜ್ಜೆಗೂಡಿಸಿ ಕುಣಿಯಲು ಕೆಲವರು ಸ್ಪರ್ಧೆಗಿಳಿದಿದ್ದರು. `ಯು ಬಿ ಮಾಯ್ ಛಮ್ಮಕ್ ಚಲ್ಲೊ...~ ಹಾಡನ್ನಂತೂ ಮತ್ತೆ ಮತ್ತೆ ಮೊಳಗಿಸಿ ಗಂಟೆಗಟ್ಟಲೆ ಕುಣಿದರು ಶಾರೂಖ್. ಅವರಿಗೆ ಸಾಥ್ ನೀಡಿದ್ದು ಜೂಹಿ ಚಾವ್ಲಾ. ಕ್ರೀಡಾಂಗಣದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಬಲ್ಲ ಗಂಭೀರ್ ತಮಗೂ ನೃತ್ಯ ಒಂದಿಷ್ಟು ಗೊತ್ತ ಎನ್ನುವಂತೆ ಗಾಳಿಯಲ್ಲಿ ಕೈಬೀಸುತ್ತ ಹೆಜ್ಜೆ ಹಾಕಿದರು.
ವಿಶ್ವವಿಜಯಕ್ಕೆ ಸಮ |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.