ಕಡೂರು: ಕೆರೆ ಅಭಿವೃದ್ಧಿ ಸಂಘಗಳ ಮೂಲಕ ವಿವಿಧ ಬೆಳೆಗಳನ್ನು ಬೆಳೆಯಲು ಕೆರೆ ನೀರನ್ನು ಸಮರ್ಪಕ ಬಳಕೆಮಾಡಿ ತೋಟಗಾರಿಕೆ, ಆಹಾರ ಉತ್ಪನ್ನಗಳನ್ನು ಬೆಳೆಯುವುದರ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದೆಂದು ಜಲ ಸಂವರ್ಧನ ಯೋಜನೆ ಸಂಘದ ಜಿಲ್ಲಾ ಸಂಯೋಜಕ ಡಾ.ಎಚ್.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ಜಲ ಸಂವರ್ಧನೆ ಯೋಜನಾ ಸಂಘ, ಸಾವಯವ ಕೃಷಿ ಸಂಶೋಧನಾ ಕೇಂದ್ರ ನವಿಲೆ ಶಿವಮೊಗ್ಗ, ಬೆಂಗಳೂರು ಕೃಷಿ ವಿವಿಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತರಕೆರೆ ಅಚ್ಚುಕಟ್ಟು ಪ್ರದೇಶಗಳ ವಿಚಾರ ವಿನಿಮಯ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಲ ಸಂರ್ವರ್ಧನಾ ಯೋಜನೆಯ ಜಿಲ್ಲಾ ಸಮನ್ವ ಯಾಧಿಕಾರಿ ಹನುಮಂತರಾಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಅರಸೀಕೆರೆ ತೆಂಗು ಸಂಶೋಧನಾ ಕೇಂದ್ರದ ಡಾ.ಪ್ರಶಾಂತ್ ತೆಂಗು ಬೆಳೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆ ನೀಡುವ ಸೌಲಭ್ಯಗಳ ಬಗ್ಗೆ ಎಸ್.ಮಂಜುನಾಥ್ ಮತ್ತು ತೋಟಗಾರಿಕಾ ಕೃಷಿ ಕುರಿತು ಶಿವಣ್ಣ ರೈತರಿಗೆ ಮಾಹಿತಿ ನೀಡಿದರು.
ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಂಗನಹಳ್ಳಿ ನಾಗರಾಜ್ ಮಾತನಾಡಿ, ರೈತರು ಕೆರೆ ಕಾಮಗಾರಿಗಳನ್ನು ಆರಂಭಿಸಿ ವಿಶ್ವಬ್ಯಾಂಕ್ನ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಮತಿಘಟ್ಟ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಎಚ್.ಟಿ.ಗೋವಿಂದಪ್ಪ, ಗ್ರಾಮಸ್ಥರ ಸಹಕಾರವ್ಲ್ಲಿಲದಿದ್ದರೆ ಕೆರೆಗಳು ಸೊರಗುತ್ತವೆ ಎಂದರು.
ಕಡೂರು ಸಮೂಹ ಮಾರ್ಗದರ್ಶನ ತಂಡದ ತಜ್ಞ ಶ್ರೀನಾಥ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತಿಘಟ್ಟ ಗ್ರಾ.ಪಂ.ಅಧ್ಯಕ್ಷೆ ನೂರ್ಜಾನ್ ವಹಿಸಿ ವಿಶ್ವ ವಿದ್ಯಾಲಯ ಮತ್ತು ಕೃಷಿತಜ್ಞರ ಸಲಹೆಯನ್ನು ಪಡೆಯುವಂತೆ ಕೋರಿದರು.