ತಿಪಟೂರು: ತಾಲ್ಲೂಕಿನ ಬೆಸಿಗೆ ರಾಮಚಂದ್ರಪುರ, ಕೆರೆಗೋಡಿಯ ಚಿಕ್ಕಕೆರೆ ಹಾಗೂ ತಡಸೂರು ಕೆರೆಗಳಿಗೆ ನಾಲೆಯಿಂದ ಹೇಮಾವತಿ ನೀರನ್ನು ತಕ್ಷಣ ಹರಿಸುವಂತೆ ಆಗ್ರಹಿಸಿ ಸುತ್ತಮುತ್ತಲ ಗ್ರಾಮಸ್ಥರು ಶುಕ್ರವಾರ ಹೊಗವನಘಟ್ಟ ಸಮೀಪದ ಹೊನ್ನವಳ್ಳಿ ಏತ ನೀರಾವರಿ ಜಾಕ್ವೆಲ್ಗೆ ಮುಕ್ತಿಗೆ ಹಾಕಿ ಪ್ರತಿಭಟಿಸಿದರು.
ತಡಸೂರು, ರಾಮಚಂದ್ರಪುರ, ಕೆರೆಗೋಡಿ, ಮಲ್ಲೇನಹಳ್ಳಿ ಮತ್ತಿತರರ ಗ್ರಾಮಗಳ ಗ್ರಾಮಸ್ಥರು ಜಾಕ್ವೆಲ್ ಸಿಬ್ಬಂದಿ ಹೊರಗೆ ಕಳುಹಿಸಿ ಬಾಗಿಲು ಮುಚ್ಚಿ ಧರಣಿ ಕುಳಿತರು. ಹೊನ್ನವಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ರಾಮಚಂದ್ರಪುರ, ಕೆರೆ ಗೋಡಿಯ ಚಿಕ್ಕಕೆರೆ ಹಾಗೂ ತಡಸೂರು ಕೆರೆಗಳಿಗೆ ಕಳೆದ ವರ್ಷ ಕೂಡ ನೀರು ಬಿಟ್ಟಿರಲಿಲ್ಲ.
ಬೆಸಿಗೆ ಕೆರೆಗೆ ಯೋಜನೆ ಆರಂಭದ ದಿನದಿಂದಲೂ ನೀರು ಹರಿದಿಲ್ಲ. ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ತಕ್ಷಣ ಈ ಕೆರೆಗಳಿಗೆ ನೀರು ಹರಿಸದಿದ್ದರೆ ಯಾವ ಕೆರೆಗಳಿಗೂ ನೀರು ಹರಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಬಂಧಿಸಿದ ಅಧಿಕಾರಿಗಳು ಲೋಪ ಅರಿತು ತಕ್ಷಣ ನೀರು ಹರಿಸಲು ಆದೇಶ ನೀಡಬೇಕು. ಅಲ್ಲಿವರೆಗೆ ಜಾಗ ಬಿಟ್ಟು ಕದಲುವುದಿಲ್ಲ. ಜಾಕ್ವೆಲ್ ಯಂತ್ರಗಳ ಚಾಲನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಹೇಮಾವತಿ ಅಧಿಕಾರಿ ವಿಜಯ್ಕುಮಾರ್ಗೆ ದೂರವಾಣಿ ಮೂಲಕ ಪರಿಸ್ಥಿತಿ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿದ್ದ ಆ ಅಧಿಕಾರಿ ದೂರವಾಣಿ ಮೂಲಕ ಧರಣಿ ನಿರತರ ಜತೆ ಮಾತನಾಡಿ, ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ಏಕಕಾಲದಲ್ಲಿ ನೀರು ಹರಿಸಲು ಸಾಧ್ಯವಿಲ್ಲ. ಸರದಿ ಮೇಲೆ ನೀರು ಬಿಡಲಾಗುವುದು. ಈಗ ಹೊನ್ನವಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಅಕ್ಟೋಬರ್ ಅ.7ರಿಂದ ಬೆಸಿಗೆ, ಕೆರೆಗೋಡಿ ಚಿಕ್ಕಕೆರೆ, ತಡಸೂರು ಕೆರೆಯೂ ಸೇರಿದಂತೆ ಕಸಬ ಹೋಬಳಿಯ ಏಳು ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಅ.7ರ ನಂತರ ತಮ್ಮ ಕೆರೆಗಳಿಗೆ ನೀರು ಬರದಿದ್ದಲ್ಲಿ ಯಾವ ಕಾರಣಕ್ಕೂ ಕಾರ್ಯಾಗಾರದಿಂದ ಬೇರೆ ಕೆರೆಗಳಿಗೆ ನೀರು ಹರಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ ಗ್ರಾಮಸ್ಥರು ಧರಣಿ ಅಂತ್ಯಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.